ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ಪ್ರತಿಯೊಬ್ಬರೂ ಕರ್ಮನಿಷ್ಠೆ ಮತ್ತು ಜ್ಞಾನನಿಷ್ಠೆಯ ಮೂಲಕ ಧರ್ಮ ಮಾರ್ಗದಲ್ಲಿ ಸಾಗಬೇಕು ಎಂದು ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಅವರು ಶನಿವಾರ ತಾಲೂಕಿನ ಆನಗೋಡಿನ ಗೋಪಾಲಕೃಷ್ಣ ದೇವಸ್ಥಾನದ ಅಷ್ಟಬಂಧ ಮಹೋತ್ಸವ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಧರ್ಮಕ್ಕೆ ಕೆಡುಕಾಗಲು ಆರಂಭವಾದರೆ ಅಧರ್ಮವನ್ನು ಕೊನೆಗೊಣಿಸಲು ಭಗವಂತ ಎದ್ದು ಬರಬೇಕಾಗುತ್ತದೆ. ಧರ್ಮವನ್ನು ಕಾಪಾಡುವ ಕಾರ್ಯ ನಮ್ಮಿಂದಾಗಬೇಕು. ಮನೆ ಮನೆಗಳಲ್ಲಿ ಅಧರ್ಮ ಪ್ರವೇಶ ಆಗುತ್ತಿದೆ. ಅದನ್ನು ತಡೆಯಬೇಕು. ಎಲ್ಲರೂ ಧರ್ಮದಿಂದ ಪರಿಪೂರ್ಣ ಬದುಕನ್ನು ರೂಪಿಸಿಕೊಳ್ಳಲು ಪ್ರೇರೇಪಿಸಬೇಕು ಎಂದರು.

ದೇವಾಲಯಗಳು ಶಿಥಿಲಗೊಂಡಾಗ ಅಷ್ಟಬಂಧಗಳ ಮೂಲಕ ಗಟ್ಟಿಗೊಳಿಸುತ್ತೇವೆ. ಹಾಗೆಯೇ ಭಕ್ತರ ನಡುವಿನ ಬಾಂಧವ್ಯ ಶಿಥಿಲಗೊಂಡಾಗ ಸಂಬಂಧವನ್ನು ಗಟ್ಟಿಗೊಳಿಸಲು ಧಾರ್ಮಿಕ ಕಾರ್ಯಕ್ರಮಗಳು ಅಗತ್ಯವಾಗಿದೆ ಎಂದರು.
ಮೊಕ್ತಸರ ಗಣಪತಿ ಮಾನಿಗದ್ದೆ ದಂಪತಿ ಶ್ರೀಗಳಿಗೆ ಫಲ ಸಮರ್ಪಿಸಿದರು. ಗೋಕರ್ಣದ ತಾಂತ್ರಿಕರಾದ ವೇ. ಗಣಪತಿ ಭಟ್ಟ ಹಿರೇ ಉಪಸ್ಥಿತರಿದ್ದರು.