ಸುದ್ಧಿಕನ್ನಡ ವಾರ್ತೆ
ಬೆಂಗಳೂರು: ಕರ್ನಾಟಕದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಇನ್ನು ಷೇರು ಮಾರುಕಟ್ಟೆ (Share Market) ಹೂಡಿಕೆ, ಬ್ಯಾಂಕಿಂಗ್, ಉಳಿತಾಯ ವಿಷಯಗಳ ಮೂಲಭೂತ ಅಂಶಗಳ ಕುರಿತಂತೆ ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಕರ್ನಾಟಕ ರಾಜ್ಯದಲ್ಲಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರದ ಸಾಕ್ಷರತಾ ಉಪಕ್ರಮದ ಭಾಗವಾಗಿ ಈ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಇದೀಗ ಮೊದಲ ಹಂತದಲ್ಲಿ ಕರ್ನಾಟಕ ರಾಜ್ಯದಲ್ಲಿನ 956 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಈ ಉಪಕ್ರಮ ಜಾರಿಗೆ ತರಲಾಗುತ್ತಿದೆ.
ಈ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಷೇರು ಮಾರುಕಟ್ಟೆ ಪರಿಕಲ್ಪನೆ, ಷೇರು ವಹಿವಾಟು, ಹೂಡಿಕೆ ಮಾಡುವ ಬಗ್ಗೆ ಮಾಹಿತಿ ನೀಡಲಾಗುವುದು. ಇದರಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಹೂಡಿಕೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಮಾತ್ರವಲ್ಲದೆಯೇ ಹಣಕಾಸು ವಂಚನೆಗಳ ಬಗ್ಗೆ ಕೂಡ ಜಾಗೃತಿ ಮೂಡಲಿದೆ. ಇದರಿಂದಾಗಿ ವಿದ್ಯಾರ್ಥಿಗಳು ಮುಂದೆ ಹಣಕಾಸು ವಂಚನೆಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕೂಡ ಅನುಕೂಲವಾಗಲಿದೆ.
ಬ್ಯಾಂಕಿಂಗ್, ಯುಪಿಐ, ಎಟಿಎಂ ಬಳಕೆಯ ಬಗ್ಗೆ ಕೂಡ ಪ್ರಾಯೋಗಿಕ ತರಗತಿ, ಬ್ಯಾಂಕಿಂಗ್ ಚಟುಯವಟಿಕೆ, ಡಿಜಿಟಲ್ ಹಣಕಾಸು ಸುರಕ್ಷತೆ ಬಗ್ಗೆ ಕೂಡ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಸರ್ಕಾರವು ಯೋಜಿಸಿದೆ.
