ಸುದ್ದಿ ಕನ್ನಡ ವಾರ್ತೆ
ಶಿರಸಿ: ಪಿತ್ರವಾಕ್ಯ ಪರಿಪಾಲನೆ ರಾಮಾಯಣದ ಶ್ರೇಷ್ಠ ಮೌಲ್ಯಗಳಲ್ಲಿ ಒಂದಾಗಿದ್ದು, ಇದು ಭಾರತೀಯ ಸಂಸ್ಕೃತಿಯ ಮಹತ್ವದ ಆದರ್ಶವೂ ಆಗಿದೆ ಎಂದು ವಿದ್ಯಾವಾಚಸ್ಪತಿ ಉಮಾಕಾಂತ ಭಟ್ ಕಿರ್ಕೋಳ್ಳಿ ಹೇಳಿದರು.

​ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗುರುವಾರ ಶ್ರೀ ರಾಜರಾಜೇಶ್ವರೀ ವಿದ್ಯಾಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ವಿಶೇಷೋಪನ್ಯಾಸ ನೀಡಿದರು.
​ತಂದೆ-ತಾಯಿ, ಗುರು-ಹಿರಿಯರ ಮಾತುಗಳನ್ನು ಗೌರವದಿಂದ ಕೇಳಿ, ಅವುಗಳನ್ನು ನಿದ್ಧೆಯಿಂದ ಜೀವನದಲ್ಲಿ ಅಳವಡಿಸಿಕೊಳ್ಳುವುದು ಶ್ರೇಯಸ್ಸಿನ ಸಾಧನವಾಗಿದೆ. ಚಕ್ರವರ್ತಿಯ ಸಿಂಹಾಸನವನ್ನು ಅಲಂಕರಿಸಬೇಕಾಗಿದ್ದ ಶ್ರೀರಾಮನು ಪಿತೃವಾಕ್ಯ ಪರಿಪಾಲನೆಗಾಗಿ ದೃಢಸಂಕಲ್ಪದಿಂದ ರಾಜ್ಯ, ಅಧಿಕಾರ ಸೇರಿದಂತೆ ಸರ್ವಸ್ವವನ್ನು ತ್ಯಜಿಸಿ ವನವಾಸಕ್ಕೆ ತೆರಳಿದನು. ಈ ಸಂದರ್ಭದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದರೂ ತನ್ನ ಕರ್ತವ್ಯ ಹಾಗೂ ಆದರ್ಶದಿಂದ ವಿಚಲಿತನಾಗಲಿಲ್ಲ ಎಂದರು. ಅಂತಿಮವಾಗಿ ಅಯೋಧ್ಯೆಯ ಸಿಂಹಾಸನವನ್ನು ಅಲಂಕರಿಸಿ ಸಾರ್ವಕಾಲಿಕ ಶ್ರೇಷ್ಠವಾದ ‘ರಾಮರಾಜ್ಯ’ವನ್ನು ಸ್ಥಾಪಿಸಿದನು. ರಾಮನ ಈ ಆದರ್ಶ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಹೇಳಿದರು.

​ಈ ಸಂದರ್ಭದಲ್ಲಿ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಗುರು-ಶಿಷ್ಯ ಸಂಬಂಧದ ಮಹತ್ವವನ್ನು ಆಶೀರ್ವಚನದ ಮೂಲಕ ವಿವರಿಸಿದರು. ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಾಚಾರ್ಯರು, ಪ್ರಾಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ವಿನಾಯಕ ಭಟ್ ಗುಂಜಗೋಡು ಕಾರ್ಯಕ್ರಮ ನಿರ್ವಹಿಸಿದರು.