ಸುದ್ದಿ ಕನ್ನಡ ವಾರ್ತೆ
ಮಂಗಳೂರು ಬೀದಿ ನಾಯಿ ಹಾಗೂ ಸಾಕು ನಾಯಿಗಳಿಗೆ ವಿಷ ಹಾಕಿ ಕೊಂದ ಹೇಯ ಘಟನೆ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಕುಟ್ಟಿಕಳ ಎಂಬಲ್ಲಿ ಸಂಭವಿಸಿದ್ದು, ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಕುಟ್ಟಿಕಳ ಜಂಕ್ಷನ್ನಲ್ಲಿ ಹಲವಾರು ಬೀದಿ ನಾಯಿಗಳಿದ್ದು, ಇವುಗಳ ಸಹಿತ ಸ್ಥಳೀಯರೋರ್ವರ ಸಾಕು ನಾಯಿಗೆ ದುಷ್ಕರ್ಮಿಗಳ್ಯಾರೋ ಆಹಾರದಲ್ಲಿ ವಿಷಬೆರಸಿ ನಾಯಿಗೆ ಹಾಕಿರುವ ಪರಿಣಾಮ ಸುಮಾರು ಹತ್ತಕ್ಕೂ ಹೆಚ್ಚು ನಾಯಿಗಳು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಸ್ಥಳೀಯರೋರ್ವರು ತನ್ನ ಸಾಕು ನಾಯಿ ಸಹಿತ ಬೀದಿ ನಾಯಿಗಳಿಗೆ ಪ್ರತಿನಿತ್ಯ ಅನ್ನಹಾರ ನೀಡುತ್ತಿದ್ದರು. ಆದರೆ ಆಹಾರದಲ್ಲಿ ವಿಷ ಬೆರೆಸಿದ್ದು, ಇದನ್ನು ತಿಂದ ನಾಯಿಗಳು ಗೋಳಿಡುತ್ತಾ ನರಳಿ, ನರಳಿ ಸಾವನ್ನಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಈ ಘಟನೆ ನಡೆಯುತ್ತಿದೆಯೆನ್ನಲಾಗಿದ್ದು, ಕಳೆದೊಂದು ತಿಂಗಳಿನಿಂದ ಸುಮಾರು ೧೦ ಬೀದಿ ನಾಯಿಗಳು ಸಾವನ್ನಪಿದ್ದರೆ. ಸೋಮವಾರ ಸ್ಥಳೀಯರೋರ್ವರ ಸಾಕುನಾಯಿ ಪ್ರಾಣಬಿಟ್ಟಿದೆ.
ವಿಚಿತ್ರವೆಂದರೆ ಕಟುಕರು ನಾಯಿ ನರಳಿ ಗೋಳಿಡುವ ದೃಶ್ಯದ ವಿಡೀಯೋವನ್ನು ಸಾಮಾಜಿಕ ಜಾಲತಾಣದಲ್ಲು ಹರಿಯಬಿಡಲಾಗಿದೆ. ಈ ಕೃತ್ಯ ಇದೀಗ
ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಾಣಿಗಳಿಗೆ ವಿಷ ನೀಡುವುದು ಅಥವಾ ಹಿಂಸೆ ನೀಡುವುದು ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು, ವಿಷ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
