ಸುದ್ದಿ ಕನ್ನಡ ವಾರ್ತೆ
ಭಟ್ಕಳ: ಇಲ್ಲಿನ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯು ನಿಷ್ಠಾವಂತ ಸಮರ್ಪಣ ಮನೋಭಾವದ ಶಿಕ್ಷಕರನ್ನು ಸಿಬ್ಬಂದಿಯನ್ನು ಹೊಂದಿರುವ ಶಾಲೆ ಎಂಬ ಹೆಗ್ಗಳಿಕೆಯೊಂದಿಗೆ ‘ರಾಷ್ಟ್ರೀಯ ಪ್ರಶಸ್ತಿಯನ್ನು’ ತನ್ನ ಮುಡಿಗೇರಿಸಿಕೊಂಡಿದೆ.

ಶಾಲೆಯ ನಿರಂತರ ಸಾಧನೆ ಮೌಲ್ಯಾಧಾರಿತ ಶಿಕ್ಷಣ ಹಾಗೂ ಶಿಕ್ಷಕರ ಸೇವೆಯನ್ನು ಪರಿಗಣಿಸಿ ಎಪ್ರಿಲ್ 12ರಂದು ಬೆಂಗಳೂರಿನ ರಾಮದ ಹೋಟೆಲ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಲಕ್ಷ್ಮೀದ ಉಪಕುಲಪತಿ ಡಾ. ಡಿ. ಎನ್. ಎಸ್. ಕುಮಾರ್ ಹಾಗೂ ಗಣ್ಯರಾದ ಈಶಿಕ ದಿಲಿಯನ್ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ಶಾಲೆಯ ಪ್ರಾಂಶುಪಾಲರಾದ ರೂಪಾ ರಮೇಶ ಖಾರ್ವಿ, ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ಹಾಗೂ ಟ್ರಸ್ಟಿ ರಮೇಶ ಖಾರ್ವಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೂಪಾ ರಮೇಶ ಖಾರ್ವಿ ಅವರು ಶಾಲೆಯ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತಾ ಇದು ಕೇವಲ ಪ್ರಶಸ್ತಿಯಲ್ಲ, ನಮ್ಮ ಶಿಕ್ಷಕರು ನೀಡಿದ ಕೊಡುಗೆಯನ್ನು ಸಂಭ್ರಮಿಸುವ ಸಂಕೇತ, ಈ ಗೌರವ ಇನ್ನಷ್ಟು ಉತ್ತಮ ಸೇವೆ ಮಾಡುವ ಪ್ರೇರಣೆ ನೀಡುತ್ತದೆ ಎಂದರು.

ಶಾಲೆಯ ಆಡಳಿತ ಮಂಡಳಿಯವರು ಶಿಕ್ಷಕರ ವೃತ್ತಿ ಬದ್ಧತೆಗೆ, ತಂಡದ ಒಗ್ಗಟ್ಟಿಗೆ ಅಭಿನಂದನೆ ಸಲ್ಲಿಸಿದರು. ಮುಂದೆಯೂ ಗುಣಮಟ್ಟದ ಶಿಕ್ಷಣ, ಸಾಂಸ್ಕೃತಿಕ ಹಾಗೂ ನೈತಿಕ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಸಂಕಲ್ಪವನ್ನು ವ್ಯಕ್ತಪಡಿಸಿದರು.