ಸುದ್ದಿ ಕನ್ನಡ ವಾರ್ತೆ
ಆಂಧ್ರಪ್ರದೇಶ: ವಿಶಾಖಪಟ್ಟಣದಲ್ಲಿ ಸ್ಥಳೀಯ ಕ್ರಿಕೆಟ್ ಪಂದ್ಯದ ವೇಳೆ ರನೌಟ್ ತೀರ್ಪಿನ ವಿವಾದದಿಂದಾಗಿ 21 ವರ್ಷದ ಅಂಪೈರ್ ಡೋಲಾ ಅಜಿತ್ ಬಾಬು ಅವರನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿದೆ. ಭಾನುವಾರ ಸಂಜೆ ನಡೆದ ಈ ಘಟನೆಯಲ್ಲಿ, ಮದ್ಯದ ಅಮಲಿನಲ್ಲಿದ್ದ ಕಾಂತ ಕಿಶೋರ್ ಎಂಬಾತ ಅಜಿತ್ ಬಾಬು ಅವರ ಎದೆಗೆ ಇರಿದಿದ್ದಾನೆ.
ವಿಶಾಖಪಟ್ಟಣದ ಪೆಡಗಡಿಲಿ ಜಂಕ್ಷನ್ನಲ್ಲಿರುವ ಸ್ಥಳೀಯ ಮೈದಾನದಲ್ಲಿ ಪಂದ್ಯ ನಡೆಯುತ್ತಿತ್ತು.
ರನೌಟ್ ತೀರ್ಪಿಗೆ ಸಂಬಂಧಿಸಿದಂತೆ ಜಗಳ ಉಂಟಾಗಿತ್ತು, ಇದನ್ನು ಮೈದಾನದಲ್ಲಿ ಬಗೆಹರಿಸಲಾಗಿತ್ತು.ಕಾಂತ ಕಿಶೋರ್ ಎಂಬಾತ ಪಂದ್ಯದ ನಂತರ ಅಜಿತ್ ಬಾಬು ಮತ್ತು ಅವರ ಸ್ನೇಹಿತರನ್ನು ಪೆಡಗಡಿಲಿ ಜಂಕ್ಷನ್ಗೆ ಕರೆಸಿ ಗಲಾಟೆ ಮಾಡಿದ್ದಾನೆ. ಕಿಶೋರ್ ಚಾಕುವಿನಿಂದ ಅಜಿತ್ ಬಾಬು ಎದೆಗೆ ಇರಿದಿದ್ದು, ಮಧ್ಯಪ್ರವೇಶಿಸಲು ಯತ್ನಿಸಿದ ಇತರರಿಗೂ ಗಾಯಗೊಳಿಸಿದ್ದಾನೆ.
ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಅಜಿತ್ ಬಾಬು ಮೃತಪಟ್ಟಿದ್ದಾರೆ. ಹತ್ಯೆಯಾದ ಅಜಿತ್ ಸ್ನೇಹಿತ ಬುಡುಮುರಿ ಚಿರಂಜೀವಿ ಕೂಡ ಗಾಯಗೊಂಡಿದ್ದು, ಆರೋಪಿಗಾಗಿ ಪೊಲೀಸರು ತೀವ್ರ ಶೋಧ
ನಡೆಸುತ್ತಿದ್ದಾರೆ.
