ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ-ಕರ್ನಾಟಕದಲ್ಲಿ ಮಳೆಯ ಕೊರತೆಯಿಂದಾಗಿ ಗೋವಾ ಗಡಿ ಭಾಗ ಚೋರ್ಲಾ ಘಾಟ್ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಂತಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಚೋರ್ಲಾ ಘಾಟ್ ನಲ್ಲಿ ಹುಟ್ಟಿಕೊಳ್ಳುತ್ತಿದ್ದ ಹತ್ತಾರು ಜಲಪಾತಗಳು ಮಳೆಯ ಕೊರತೆಯಿಂದಾಗಿ ಮಂಗಮಾಯವಾಗಿದೆ.
ಗೋವಾ ರಾಜ್ಯವು ಪ್ರಸಿದ್ಧ ಪ್ರವಾಸಿ ತಾಣಗಳ ಮೂಲಕ ಜಗತ್ಪ್ರಸಿದ್ಧಿ ಪಡೆದುಕೊಂಡಿದೆ. ಗೋವಾ ರಾಜ್ಯವು ವರ್ಷದ 12 ತಿಂಗಳೂ ಪ್ರವಾಸಿಗರನ್ನು ಆಕರ್ಷಿಸುವ ಪ್ರವಾಸಿ ತಾಣವಾಗಿದೆ. ಇದರಿಂದಾಗಿ ಗೋವಾದಲ್ಲಿ ವರ್ಷದ 12 ತಿಂಗಳೂ ದೇಶ-ವಿದೇಶಿಯ ಪ್ರವಾಸಿಗರು ಆಕರ್ಷಿತರಾಗುತ್ತಾರೆ. ಆದರೆ ಪ್ರಸಕ್ತ ವರ್ಷ ಮಳೆಯ ಕೊರತೆಯು ಗೋವಾ ಮಳೆಗಾಲ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಂತಾಗಿದೆ.
ಮಳೆಗಾಲದ ಸಂದರ್ಭದಲ್ಲಿ ಗೋವಾ-ಕರ್ನಾಟಕ ಗಡಿ ಭಾಗವಾದ ಚೋರ್ಲಾ ಘಾಟ್ ನಲ್ಲಿ ಹತ್ತಾರು ಜಲಪಾತಗಳು ಹುಟ್ಟಿಕೊಳ್ಳುವುದರಿಂದ ಈ ಭಾಗದಲ್ಲಿ ಪ್ರತಿದಿನ ಪ್ರವಾಸಿಗರ ಗರ್ದಿ ಕಂಡುಬರುತ್ತಿತ್ತು. ಅದರಲ್ಲೂ ವೀಕೆಂಡ್ ರಜಾ ದಿನಗಳಲ್ಲಂತೂ ಇಲ್ಲಿ ಭಾರಿ ಪ್ರಮಾಣದಲ್ಲಿ ಪ್ರವಾಸಿಗರ ಗರ್ದಿ ಕಂಡುಬರುತ್ತಿತ್ತು. ಆದರೆ ಪ್ರಸಕ್ತ ಬಾರಿ ಮಳೆಯ ಕಪೊರತೆಯಿಂದಾಗಿ ಇಲ್ಲಿ ಜಲಪಾತ ಮಂಗಮಾಯವಾಗಿದೆ. ಇದರಿಂದಾಗಿ ಈ ಭಾಗದಲ್ಲಿ ಪ್ರವಾಸಿಗರ ಕೊರತೆ ಕಾಣುತ್ತಿದೆ.
ಇದೀಗ ಕೊಂಚ ಮಳೆ ಆರಂಭವಾಗಿದ್ದರೂ ಕೂಡ ಚೋರ್ಲಾ ಘಾಟ್ ನಲ್ಲಿ ಜಲಪಾತಗಳು ಮೈದುಂಬಿಕೊಳ್ಳುವಷ್ಟು ನೀರು ಬಾರದ ಕಾರಣ ಇಲ್ಲಿಗೆ ಆಗಮಿಸುವ ಪ್ರವಾಸಿಗರಲ್ಲಿ ಬೇಸರವುಂಟಾಗುವಂತಾಗಿದೆ. ಆದರೆ ಮುಂದರುವ ದಿನಗಳಲ್ಲಿ ಉತ್ತಮ ಮಳೆಯಾದರೆ ಇಲ್ಲಿನ ಜಲಪಾತಗಳು ತುಂಬಿ ಹರಿಯಬಹುದು ಎಂಬ ಆಶಯ ವ್ಯಕ್ತವಾಗುತ್ತಿದೆ.
