ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಶಿಕೇರಿ ಬೀಚ್ ನಲ್ಲಿ ಮಂಗಳವಾರ ಮೀನುಹಿಡಿಯಲು ಬೋಟ್ ನಲ್ಲಿ ತೆರಳಿದ್ದ ಉಮೇಶ್ ದಾಬೋಳಕರ್ (46) ಎಂಬ ವ್ಯಕ್ತಿ ಸಮುದ್ರ ಮಧ್ಯದಲ್ಲಿ ಆಯತಪ್ಪಿ ಬಿದ್ದು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ನಾಲ್ವರು ಮೀನುಗಾರರು ಈ ಮೀನುಗಾರಿಕಾ ಬೋಟ್ ನಲ್ಲಿ ತೆರಳಿದ್ದರು. ಉಮೇಶ ದಾಬೋಳಕರ್ ನೀರಿಗೆ ಬೀಳುತ್ತಿದ್ದಂತೆಯೇ ಇತರ ಮೀನುಗಾರರು ಆತನನ್ನು ರಕ್ಷಿಸಲು ಪ್ರಯತ್ನಿಸಿದರು. ತಮ್ಮ ಬಳಿಯಿದ್ದ ಕಾಲಿ ಕ್ಯಾನ್ ಎಸೆದರು. ಅದನ್ನು ಹಿಡಿದು ಮೇಲೆ ಬರುತ್ತಿರುವಾಗಲೇ ಮತ್ತೆ ಮುಳುಗಿ ನಾಪತ್ತೆಯಾದ ಎಂದು ಇತರ ಮೀನುಗಾರರು ಬೇಸರ ವ್ಯಕ್ತಪಡಿಸಿದರು.

ಸಮುದ್ರದಲ್ಲಿ ಸದ್ಯ ಭಾರಿ ಅಲೆ ಏಳುತ್ತಿದ್ದು , ಈ ಅಲೆಯ ರಭಸದಿಂದಾಗಿ ಬೋಟ್ ಮುಳುಗುವಂತಹ ಸ್ಥಿತಿಯಲ್ಲಿ ಈ ಮೀನುಗಾರ ಬೋಟ್ ನಿಂದ ಆಯತಪ್ಪಿ ಸಮುದ್ರಕ್ಕೆ ಬಿದ್ದ ಎನ್ನಲಾಗಿದೆ. ಈತ ಮೂಲತಃ ಗೋವಾದ ನೇರುಲ್ ನಿವಾಸಿ ಎನ್ನಲಾಗಿದೆ.
ರಕ್ಷಣಾ ತಂಡ ಮತ್ತು ಸ್ಥಳೀಯ ಮೀನುಗಾರರು ಉಮೇಶ ದಾಬೋಳಕರ್ ಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.