ಸುದ್ದಿ ಕನ್ನಡ ವಾರ್ತೆ
ಜೊಯಿಡಾ: ತಾಲೂಕಿನ ಬುಡಕಟ್ಟು ಕುಣಬಿ ಗಳ ಕುಗ್ರಾಮದ ಡಿಗ್ಗಿ ಹುತ್ತಿನ ದೇವತೆ ಗೌಳಾ ದೇವಿ ಜಾತ್ರೆ ಮಾರ್ಚ್ 1 ರಂದು ನಡೆಯಲಿದೆ. ತಾಲೂಕಾಡಳಿತವು ಜಾತ್ರೆಗೇ ಯಾವುದೇ ಸಹಕಾರ ನಿಡುವುದಿಲ್ಲ ಎಂದು ಕುಣಬಿ ಸಮಾಜದಿಂದ ಸಂಸದರಿಗೆ ನೀಡಿದ ದೂರಿನ ಅನ್ವಯ ತಹಶಿಲ್ದಾರ ಜೊಯಿಡಾ ರವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಪ್ರಥಮ ಸಭೆ ಜೊಯಿಡಾ ತಹಶಿಲ್ದಾರ ಆಡಳಿತ ಸೌಧದಲ್ಲಿ ನಡೆಯಿತು.
ಬಜಾರಕುಣಂಗ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಡಿಗ್ಗಿ ಗೌಳಾ ದೇವಿ ಜಾತ್ರೆ ಬುಡಕಟ್ಟು ಕುಣಬಿಗಳ ಸಾಂಪ್ರದಾಯದಂತೆ ನಡೆಯುವ ದೊಡ್ಡ ಜಾತ್ರೆಯಾಗಿದೆ. ಗೋವಾ, ಮಹಾರಾಷ್ಟ್ರ, ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳಿಂದ ಸಾವಿರಾರು ಭಕ್ತರು ಸೇರುತ್ತಾರೆ. ಸ್ಥಳಿಯರು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಆದರೆ ಸರಕಾರದ ಆಡಳಿತ ರಸ್ತೆ, ಕುಡಿಯುವ ನೀರು, ಭದ್ರತೆ, ವಿದ್ಯುತ್ ಯಾವುದೇ ವ್ಯವಸ್ಥೆ ನೋಡುತ್ತಿರಲಿಲ್ಲ.
ಸೋಮವಾರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ರವರು ಜೊಯಿಡಾಗೆ ಬಂದಾಗ ತಾಲೂಕು ಆಡಳಿತ ಯಾವುದೇ ಸಮಸ್ಯೆಗೆ ಸ್ಪಂದಿಸುವುದಿಲ್ಲ ಎಂದು ಕುಣಬಿ ಸಮಾಜದಿಂದ ದೂರ ನಿಡಲಾಗಿತ್ತು. ತಕ್ಷಣ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರವಾರಗೆ ದೂರವಾಣಿಯಲ್ಲಿ ಮಾತನಾಡಿದರು ಜಾತ್ರೆಗೆ ಅಗತ್ಯ ಸೌಲಭ್ಯ ಸೂಚಿಸಲು ಹೇಳದ ಸಂಸದರು ತಕ್ಷಣ ತಾಲೂಕ ಮಟ್ಟದ ಅಧಿಕಾರಿಗಳ ಸಭೆ ಕರೆದು ಎಲ್ಲಾ ವ್ಯವಸ್ಥೆ ಮಾಡುವಂತೆ ತಹಶಿಲ್ದಾರ ರವರಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ರವರು ಸೂಚಿಸಿದರು.
ತಹಶಿಲ್ದಾರ ಮಂಜುನಾಥ ಮುನ್ನಳ್ಳಿ ಅಧ್ಯಕ್ಷತೆಯಲ್ಲಿ ಕುಡಿಯುವ ನೀರು, ಹೆಸ್ಕಾಂ, ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್, ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ ಗಳ ಸಭೆ ನಡೆಸಿದರು. ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸೌಲಭ್ಯ ಕಲ್ಪಿಸಲು ಖಡಕ್ ಸೂಚಿಸಿದರು.
ಈ ಸಂದರ್ಭದಲ್ಲಿ ಗೌಳಾ ದೇವಿ ಟ್ರಸ್ಟ್ ಸಮಿತಿ ಅಧ್ಯಕ್ಷ ಪ್ರದೀಪ್ ವೇಳಿಪ, ರವಿದಾಸ ಮಿರಾಶಿ, ಸಂದೀಪ್ ಗಾವಡಾ, ಸಂಜಯ ಮಿರಾಶಿ, ಇಲಾಖಾ ಅಧಿಕಾರಿಗಳು,ಮುಂತಾದವರು ಇದ್ದರು.
ಮಾರ್ಚ್ 1 ಜಾತ್ರೆ
ಡಿಗ್ಗಿ ಗೌಳಾ ದೇವಿ ಜಾತ್ರೆ ಮಾರ್ಚ್ 1 ರವಿವಾರ ದಂದು ನಡೆಯಲಿದೆ. ಬುಡಕಟ್ಟು ಕುಣಬಿಗಳೇ ಆಚರಿಸುವ ಪುರಾತನ ದೊಡ್ಡ ಜಾತ್ರೆಯಾಗಿದೆ.
