ಸುದ್ದಿ ಕನ್ನಡ ವಾರ್ತೆ
​ಗೋಕರ್ಣ: ಆತ್ಮಾಕ್ಷಾತ್ಕಾರಕ್ಕೂ ಶರೀರ ಅಗತ್ಯ, ಧರ್ಮ, ಅರ್ಥ, ಕಾಮ, ಮೋಕ್ಷಗಳ ಸಾಧನೆ ಶರೀರದಿಂದಲೇ ಸಾಧ್ಯವಾಗುವುದರಿಂದ ಶರೀರವನ್ನು ಉಳಿಸಿಕೊಳ್ಳಲು ಆಹಾರ ಅತ್ಯಗತ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

 

​ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಮಂಗಳವಾರ ‘ಅನ್ನ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ನೀಡಿದ ಅವರು, ಶಿವ-ಪಾರ್ವತಿಯರ ಅನ್ನಪೂರ್ಣೇಶ್ವರಿ ಪ್ರಸಂಗವನ್ನು ವಿವರಿಸಿ ಅನ್ನದ ಮಹತ್ವವನ್ನು ತಿಳಿಸಿದರು.
​ಅನ್ನಪೂರ್ಣೇಶ್ವರಿ ಜ್ಞಾನಾನುಗ್ರಹವನ್ನೂ ಮಾಡುತ್ತಾಳೆ. ಶಂಕರಾಚಾರ್ಯರ ಅನ್ನಪೂರ್ಣೇಶ್ವರಿ ಸ್ತೋತ್ರದಲ್ಲೂ ಜ್ಞಾನ, ಭಕ್ತಿ ಹಾಗೂ ಮುಕ್ತಿಗೆ ಅನ್ನದ ಮಹತ್ವವನ್ನು ಪ್ರತಿಪಾದಿಸಲಾಗಿದೆ ಎಂದರು.

ಖ್ಯಾತ ​ಜ್ಯೋತಿಷಿ ಪಾಳಕಾಡು ವೆಂಕಟೇಶ ಭಟ್, ಶಕಟಪುರ ಮಠದ ವ್ಯವಸ್ಥಾಪಕ ರಾಘವ, ನಿವೃತ್ತ ಆದಾಯ ತೆರಿಗೆ ಆಯುಕ್ತ ಗಿರೀಶ ಕೋಣಮೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಗಣಪತಿ ವೆಂಕಟರಮಣ ಹೆಗಡೆ ಕಾನಮೂಲೆ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು.

​ರಾಣಾಯನೀಯ ಶಾಖೆಯ ಸಾಮವೇದ ಪಾರಾಯಣ: ಚಾತುರ್ಮಾಸ್ಯದ ಅಂಗವಾಗಿ ಸಾಮವೇದದ ರಾಣಾಯನೀಯ ಶಾಖೆಯ ಪಾರಾಯಣ ಸೆ.೧ರಿಂದ ೫ರವರೆಗೆ ನಡೆಯಲಿದ್ದು, ವೇ.ಮೂ. ಸುಬ್ರಹ್ಮಣ್ಯ ಭಟ್ಟ ಉಂಚಗೇರಿ ಅವರ ನೇತೃತ್ವದಲ್ಲಿ ಪಾರಾಯಣ ಆರಂಭವಾಯಿತು. ರಾಣಾಯನೀಯ ಶಾಖೆಯು ಹೊನ್ನಾವರ ಭಾಗದಲ್ಲಿ ಮಾತ್ರ ಉಳಿದುಕೊಂಡಿದ್ದು, ಅದರ ಸಂರಕ್ಷಣೆಗೆ ಶ್ರೀಮಠದ ಮಾರ್ಗದರ್ಶನದಲ್ಲಿ ಹಲವು ಕಾರ್ಯಗಳು ನಡೆದಿವೆ.