ಸುದ್ದಿ ಕನ್ನಡ ವಾರ್ತೆ
​ಭಟ್ಕಳ:ತಾಲೂಕಿನ ಜಾಲಿ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿ 11 ಜಾನುವಾರುಗಳನ್ನು ರಕ್ಷಿಸಿದ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.

​ಸುಮಾರು ₹1.40 ಲಕ್ಷ ಮೌಲ್ಯದ 14 ಜಾನುವಾರುಗಳನ್ನು ಐಷರ್ ಕಂಪನಿಯ ಇನ್ಸುಲೇಟರ್ ವಾಹನದಲ್ಲಿ ಹಿಂಸಾತ್ಮಕವಾಗಿ ಹಗ್ಗಗಳಿಂದ ಕಟ್ಟಿ, ನೀರು-ಮೇವು ನೀಡದೆ ಒಂದರ ಮೇಲೊಂದು ತುಂಬಿಕೊಂಡು ಯಾವುದೇ ದಾಖಲೆಗಳಿಲ್ಲದೆ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಗುರುವಾರ ಬೆಳಗಿನ ಜಾವ 4.50ರ ಸುಮಾರಿಗೆ ಜಾಲಿ ಕ್ರಾಸ್ ಬಳಿ ಪೊಲೀಸರು ವಾಹನ ತಡೆದು ನಿಲ್ಲಿಸಲು ಸೂಚಿಸಿದರೂ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ಬಳಿಕ ಡೊಂಗರಪಳ್ಳಿ ಸಮೀಪದ ಖುಲ್ಲಾ ಜಾಗದಲ್ಲಿ ವಾಹನ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಾಹನದಲ್ಲಿದ್ದ ಜಾನುವಾರುಗಳಲ್ಲಿ ಒಂದು ಕೋಣ, ಒಂದು ಎಮ್ಮೆ ಹಾಗೂ ಒಂದು ಎತ್ತು ಉಸಿರುಗಟ್ಟಿ ಮೃತಪಟ್ಟಿದ್ದು, ಉಳಿದ 11 ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ್ದಾರೆ. ನಗರ ಠಾಣೆ ಪಿಎಸ್‌ಐ ತಿಮ್ಮಪ್ಪ ಎಸ್. ದೂರು ನೀಡಿದ್ದು, ಪಿಎಸ್‌ಐ ನವೀನ್ ನಾಯ್ಕ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.