ಸುದ್ದಿ ಕನ್ನಡ ವಾರ್ತೆ
ಕಾರವಾರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಅಳ್ಳಂಕಿಯ ಶ್ರೀ ವರಸಿದ್ಧಿ ಗಣಪತಿ ದೇವರ ಪುನರಾಷ್ಟ್ರ ಬಂಧ ಮತ್ತು ಪೂರ್ಣ ಕಲಾವೃದ್ಧಿ ತಾಂತ್ರಿಕ ಮಹೋತ್ಸವವು ಎ.18 ಮತ್ತು 19ರಂದು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ತಿಳಿಸಿದ್ದಾರೆ.
ಆಗಮೋಕ್ತ ವೇ.ಮೂ. ಕಟ್ಟೆ ಶಂಕರ ಭಟ್ಟರ ಆಚಾರ್ಯತ್ವದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ. ಎ.18 ರಂದು ದೇವತಾ ಪ್ರಾರ್ಥನೆಯೊಂದಿಗೆ ಬಂಧ ಶಿಥಿಲ ಪ್ರಾಯಶ್ಚಿತ ಸಹಿತ ಆಗಮೋಕ್ತ ವಿಧಿವಿಧಾನಗಳೊಂದಿಗೆ ಪುನರಾಷ್ಟ್ರ ಬಂಧ ಮತ್ತು ದಂಡಬಲಿ ಉತ್ಸವ ನಡೆಯಲಿದೆ. ಎ.19ರಂದು ಮಧ್ಯಾಹ್ನ ಶಕ್ತಿಹೋಮ, ಪೂರ್ಣ ಕಲಾವೃದ್ಧಿ, ಅಥರ್ವಶೀರ್ಷ ಮೋದಕ ಹವನ ಹಾಗೂ ಸಾಮೂಹಿಕ ಸತ್ಯನಾರಾಯಣ ವ್ರತ ಪೂಜೆ ಮತ್ತು ಮಹಾ ಅನ್ನಸಂತರ್ಪಣೆ ಜರುಗಲಿದೆ. ಸಂಜೆ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 9 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಮಾಜಿ ಜಿ.ಪಂ. ಅಧ್ಯಕ್ಷ ಆರ್.ಎಸ್. ರಾಯ್ಕರ್ ಹಾಗೂ ಚಂದ್ರಕಾಂತ ಕೊಚರೇಕರ ಅವರ ಉಪಸ್ಥಿತಿಯಲ್ಲಿ, ಪ್ರಸಿದ್ಧ ಕವಿ ಹಾಗೂ ಸಾಹಿತಿ ಡಾ. ಜಿ.ಎಸ್. ಹೆಗಡೆ ಅವರಿಗೆ ನಾಗರಿಕ ಸನ್ಮಾನ ನೀಡಿ ಗೌರವಿಸಲಾಗುವುದು.
ಸಭಾ ಕಾರ್ಯಕ್ರಮದ ನಂತರ ಶ್ರೀ ಮುರ್ಕುಂಡೇಶ್ವರ ನಾಟ್ಯ ವೃಂದದವರಿಂದ ಚಿನ್ನದ ಗೊಂಬೆ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಸೇವಾ ಸಮಿತಿ ಪ್ರಕಟಣೆಯಲ್ಲಿ ವಿನಂತಿಸಿದೆ.
