ಸುದ್ದಿ ಕನ್ನಡ ವಾರ್ತೆ
ಕುಮಟಾ: ಭಾರತೀಯ ಸೇನೆಯಲ್ಲಿ ಸುದೀರ್ಘ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಭಾರತೀಯ ಯೋಧ ಹವಾಲ್ದಾರ್ ವಿನಾಯಕ ಹೊಸಬಯ್ಯ ಪಟಗಾರ ಅವರಿಗೆ ಮಾಸ್ತಿಕಟ್ಟೆಯ ಮಹಾಸತಿ ದೇವಸ್ಥಾನದಲ್ಲಿ ಭವ್ಯ ಸ್ವಾಗತ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಯೋಧನ ಆರೋಗ್ಯ, ಆಯಸ್ಸಿಗಾಗಿ ಪೂಜೆ ನೆರವೇರಿಸಿ, ಹಾರಹೂವಿನೊಂದಿಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಗ್ರಾಮದ ಜನರು ಹಾಗೂ ದೇಶಾಭಿಮಾನಿಗಳು ಯೋಧನ ಸೇವೆಯನ್ನು ಕೊಂಡಾಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕುಮಟಾ ಮಾಜಿ ಸೈನಿಕರ ಸಂಘ, ಯುವಾ ಬ್ರಿಗೇಡ್ ಕುಮಟಾ ಹಾಗೂ ಜಿಲ್ಲಾ ಗ್ರಾಮ ಒಕ್ಕಲು ಯುವ ಬಳಗ ಉತ್ತರಕನ್ನಡ ಸಂಘಟನೆಗಳ ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ದೇಶಾಭಿಮಾನಿಗಳು ಉಪಸ್ಥಿತರಿದ್ದರು.

ಈ ವೇಳೆ ಶಾಸಕ ದಿನಕರ ಶೆಟ್ಟಿ ಮಾತನಾಡಿ, “ಸೇನೆಗೆ ಸೇರಿ ದೇಶ ಸೇವೆ ಸಲ್ಲಿಸುವುದು ಪವಿತ್ರವಾದ ಕಾರ್ಯ. ಮಕ್ಕಳನ್ನು ಸೇನೆಗೆ ಕಳುಹಿಸುವಾಗ ಪಾಲಕರಲ್ಲಿ ಭಯ ಸಹಜ. ಆದರೆ ಇಂತಹ ಯೋಧರ ಪೋಷಕರು ತಮ್ಮ ಮಕ್ಕಳನ್ನು ದೇಶ ಸೇವೆಗೆ ಸಮರ್ಪಿಸಿರುವುದು ಹೆಮ್ಮೆಯ ವಿಷಯ. ಪದವೀಧರರಾಗಿರುವ ವಿನಾಯಕ ಪಟಗಾರ ಅವರು ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ಗೌರವಾನ್ವಿತವಾಗಿ ನಿವೃತ್ತಿ ಹೊಂದಿ ಮರಳಿರುವುದು ಸಂತಸದ ವಿಚಾರ” ಎಂದು ಹೇಳಿದರು.