ಸುದ್ದಿ ಕನ್ನಡ ವಾರ್ತೆ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಳಚೆಯ ಪುರೋಹಿತರೊಬ್ಬರಿಗೆ ಮದುವೆ ಮಾಡಿಸುವುದಾಗಿ ನಂಬಿಸಿ ಮೂವರು ಮೋಸ ಮಾಡಿದ್ದಾರೆ. ಉತ್ತರ ಭಾರತದ ಯುವತಿಯನ್ನು ಮದುವೆ ಮಾಡಿಸಲು 6 ಲಕ್ಷ ರೂ ಹಣಪಡೆದು ಯಾಮಾರಿಸಿದ್ದಾರೆ ಎಂದು ಪೋಲಿಸ್ ದೂರು ದಾಖಲಾಗಿದೆ.
ಕಳಚೆ ಕರಿಮನೆಯಲ್ಲಿ ವಾಸವಾಗಿರುವ ರಾಮಕೃಷ್ಣ ಭಟ್ಟರು ಪುರೋಹಿತ್ಯ ಮಾಡಿಕೊಂಡಿದ್ದರು. 37 ವರ್ಷವಾದರೂ ಅವರಿಗೆ ಮದುವೆ ಭಾಗ್ಯ ಕೂಡಿಬಂದಿರಲಿಲ್ಲವಾಗಿತ್ತು. ಲಕ್ಷ್ಮೀನಾರಾಯಣ ಭಟ್ಟ, ಸೋಂದಾ, ಬಕ್ಕಳದ ನಾಗರಾಜ ಭಟ್ಟ ಹಾಗೂ ಉತ್ತರ ಪ್ರದೇಶ ರೇಣುಕಾಕೋಟದ ಮಾಲಾ ಜಿ ತ್ರಿಪಾಠಿ ರಾಮಕೃಷ್ಣ ಭಟ್ಟರಿಗೆ ಮದುವೆ ಮಾಡಿಸುವ ಜವಾಬ್ದಾರಿವಹಿಸಿಕೊಂಡರು.
ಉತ್ತರ ಪ್ರದೇಶದಿಂದ ಕನ್ಯ ಕೊಡಿಸುವ ಮಾತನಾಡಿ, ವ್ಯವಹಾರವನ್ನೂ ಮುಗಿಸಿ ರಾಮಕೃಷ್ಣ ಭಟ್ಟರಿಂದ 6 ಲಕ್ಷ ರೂ ಹಣವನ್ನೂ ಪಡೆದರು. ಉತ್ತರ ಪ್ರದೇಶ ಗೋಪಾಲಪುರದ ಪೂಜಾ ಮಿಶ್ರಾ ಜೊತೆ ರಾಮಕೃಷ್ಣ ಭಟ್ಟರ ಸಂಬಂಧ ಬೆಸೆಯುವ ಸಿದ್ದತೆ ನಡೆಸಿದರು. ಲಕ್ಷ್ಮೀನಾರಾಯಣ ಭಟ್ಟ, ನಾಗರಾಜ ಭಟ್ಟ ಹಾಗೂ ಮಾಲಾ ಜಿ ತ್ರಿಪಾಠಿ ಸೇರಿ ರಾಮಕೃಷ್ಣ ಭಟ್ಟರನ್ನು ಉತ್ತರ ಪ್ರದೇಶಕ್ಕೆ ಕರೆದೊಯ್ದು ಗೋಪಾಲಪುರದ ಪೂಜಾ ಮಿಶ್ರಾ ಅವಳೊಂದಿಗೆ ನಿಶ್ಚಿತಾರ್ಥವನ್ನು ಮಾಡಿಸಿದರು.
ಅದಾದ ನಂತರ ಪೂಜಾ ಮಿಶ್ರಾ ಅವರು ರಾಮಕೃಷ್ಣ ಭಟ್ಟರನ್ನು ಭೇಟಿಯಾಗಲು ಕಳಚೆಗೆ ಬಂದಿದ್ದು ಅಗಸ್ಟ 17ರಂದು ಬೆಳಗ್ಗೆ `ವಾಕಿಂಗ್ ಹೋಗೋಣ’ ಎಂದು ರಾಮಕೃಷ್ಣ ಭಟ್ಟರನ್ನು ಕರೆದೊಯ್ದ ಪೂಜಾ ಮಿಶ್ರಾ ಅವರು ಭಟ್ಟರನ್ನು ರಸ್ತೆ ಬದಿಗೆ ದೂಡಿ ಪರಾರಿಯಾಗಿದ್ದಾರೆ.
`ಮದುವೆಯನ್ನು ಮಾಡಿಸಲಿಲ್ಲ. ಕೊಟ್ಟ ಕಾಸು ಕೂಡಾ ಮರಳಿಸಲಿಲ್ಲ’ ಎಂಬ ಕಾರಣಕ್ಕೆ ಮದುವೆಯಾಗದ ಪೂಜಾ ಮಿಶ್ರಾ ವಿರುದ್ಧ ರಾಮಕೃಷ್ಣ ಅನಂತ ಭಟ್ಟ ಕರಿಮನೆ ಕಳಚೆ ಇವರುಪೊಲೀಸ್ ದೂರು ನೀಡಿದರು. ಅವರ ಜೊತೆ ಲಕ್ಷ್ಮೀನಾರಾಯಣ ಭಟ್ಟ, ನಾಗರಾಜ ಭಟ್ಟ ಹಾಗೂ ಮಾಲಾ ಜಿ ತ್ರಿಪಾಠಿ ಅವರಿಂದಲೂ ಅನ್ಯಾಯವಾದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಈ ಕುರಿತು ಸ್ಥಳಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಪಿಎಸ್ಐ ಪಶೇಡಜಿ ಚೌಹ್ವಾಣ್ ತನಿಖೆ ನಡೆಸುತ್ತಿದ್ದಾರೆ. ಪಿಐ ರಮೇಶ ಹಾನಾಪುರ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷಿ ಸಂಗ್ರಹಿಸಿದ್ದಾರೆ.