ಸುದ್ದಿ ಕನ್ನಡ ವಾರ್ತೆ
ಬೆಂಗಳೂರು:ಶಿಕ್ಷಕರು, ಮಕ್ಕಳ ಅನುಕೂಲಕ್ಕಾಗಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶನಿವಾರದ ದಿನಕ್ಕೆ ಮಾತ್ರ ಅನ್ವಯಿಸುವಂತೆ ಶಾಲಾ ಸಮಯದ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 8.30 ರಿಂದ ಶಾಲೆ ಆರಂಭಿಸಿ ಮಧ್ಯಾಹ್ನ 12.30 ರವರೆಗೆ ತರಗತಿ ನಡೆಸಲು ಶಿಕ್ಷಣ ಇಲಾಖೆ ಏಕರೂಪದ ಸಮಯ ನಿಗದಿಪಡಿಸಿದೆ. ಇದು ಜೂ.27ರ ಶನಿವಾರದಿಂದಲೇ ಜಾರಿಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯಾದ್ಯಂತ ಪ್ರಾದೇಶಿಕವಾರು ಬೇರೆ ಸಮಯವನ್ನು ಪಾಲಿಸಲಾಗುತ್ತಿದೆ. ಕೆಲವೆಡೆ ಬೆಳಗ್ಗೆ 7.30ರಿಂದ 11.30, ಇನ್ನು ಕೆಲವೆಡೆ ಬೆಳಗ್ಗೆ 8ರಿಂದ 12 ಗಂಟೆ ಹೀಗೆ ಬೇರೆ ಬೇರೆ ಸಮಯ ಪಾಲನೆ ಆಗುತ್ತಿದೆ. ಇದರ ಬದಲು ಒಂದೇ ಸಮಯ ನಿಗದಿಪಡಿಸಲಾಗಿದೆ.
ಆನ್ಲೈನ್ ಹಾಜರಾತಿ ಕಾರಣ: ದೇಶದಲ್ಲಿ ಮೊದಲ ಬಾರಿಗೆ ಸರ್ಕಾರಿ ನೌಕರರಿಗೆ ಕರ್ತವ್ಯ ಮೊಬೈಲ್ ಅಪ್ಲಿಕೇಶನ್ ಮೂಲಕ ಎಐ ಡಿಜಿಟಲ್ ಹಾಜರಾತಿ ಜಾರಿಗೊಳಿಸಿದೆ. ಈವರೆಗೆ ಹಾಜರಾತಿ ಪುಸ್ತಕದಲ್ಲಿ ದಾಖಲಾಗುತ್ತಿತ್ತು. ಶನಿವಾರ ಬಸ್ ಸಿಗದಿರುವುದು ಸೇರಿಬೇರೆ ಕಾರಣಗಳಿಂದ ಶಿಕ್ಷಕರು ತಡವಾಗಿ ಬಂದರೂ ಸಮಸ್ಯೆ ಆಗುತ್ತಿರಲಿಲ್ಲ. ಆದರೆ, ಈಗ ಒಂದು ನಿಮಿಷ ತಡವಾದರೂ ಗೈರು ಆಗುತ್ತದೆ. ಹಾಗಾಗಿ ಶನಿವಾರ ಸಮಯ ಬದಲಿಗೆ ಶಿಕ್ಷಕರ ವಲಯದಲ್ಲಿ ಕೇಳಿಬಂದಿತ್ತು. ಹಾಗಾಗಿ ಸಮಯ ತಿದ್ದುಪಡಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
