ಸುದ್ದಿ ಕನ್ನಡ ವಾರ್ತೆ
ಹೊಸನಗರ ತಾಲೂಕಿನ ಯಡೂರು ಗಿಣಿಕಲ್ ಬಳಿ ಇರುವ ತಲಾಸಿ ಅಬ್ಬಿ ಫಾಲ್ಸ್ ವೀಕ್ಷಣೆಗೆ ತೆರಳಿದ್ದ ವೇಳೆ ತಮಿಳುನಾಡು ಮೂಲದ ಯುವಕ ನೋರ್ವ ಕಲ್ಲು ಬಂಡೆಗಳ ನಡುವೆ ಇಳಿಯುವ ಸಾಹಸ ಮಾಡಿ ನೀರುಪಾಲಾಗಿ ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ತಮಿಳುನಾಡು ಸೇಲಂ ಕಲ್ಲುಕುರಚಿ ಜಿಲ್ಲೆಯ ರಮೇಶ (47). ಮೃತ ವ್ಯಕ್ತಿ.
ರಮೇಶ್ ಬೆಂಗಳೂರಿನ ಎಸ್ಎಮ್ಎಲ್ ಎಲೆಕ್ಟ್ರಿಕಲ್ ಪ್ರೈ ಕಂಪನಿಯ ಮ್ಯಾನೇಜರ್ ಆಗಿದ್ದು ತನ್ನ ಸ್ನೇಹಿತರಾದ ಭರತ್, ಮೋಹನ್, ಅರುಣಾವಲಂ, ಗಿರೀಶ್ ಜೊತೆ ಸೇರಿ ಬೆಂಗಳೂರಿನಿಂದ ಐವರು ಪ್ರವಾಸಕ್ಕೆ ಬಂದ ವೇಳೆ ಈ ದುರ್ಘಟನೆ ನಡೆದಿದೆ.
ಬೆಳಿಗ್ಗೆ ತೀರ್ಥಹಳ್ಳಿಯ ಕುಂದಾದ್ರಿ, ಕವಲೇದುರ್ಗ ನೋಡಿಕೊಂಡು ಮಧ್ಯಾಹ್ನದ ವೇಳೆ ಅಬ್ಬಿಫಾಲ್ಸ್ ಗೆ ಬಂದಿದ್ದರು.
ಸುಮಾರು 150 ಅಡಿ ಧುಮುಕುವ ಫಾಲ್ಸ್ ಮೇಲ್ಭಾಗದಲ್ಲಿ ವೀಕ್ಷಣೆಗೆ ತೆರಳಿದ್ದು ರಮೇಶ ಎಂಬಾತ ಅಲ್ಲಿಂದ ಧುಮುಕುವ ನೀರಿಗೆ ಇಳಿಯುವ ಸಾಹಸ ಮಾಡಿದ್ದಾನೆ. ಕೆಳಗಡೆ ಬಂಡೆ ಸಿಗದ ಕಾರಣ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.
ರಮೇಶ್ ನೀರುಪಾಲು ಆಗುವ ದೃಶ್ಯ ಸ್ನೇಹಿತರ ಮೊಬೈಲ್ ನಲ್ಲಿ ಸೆರೆಯಾಗಿದ್ದು ವೀಡಿಯೋ ವೈರಲ್ ಆಗಿದೆ.
ನೀರುಪಾಲಾದ ಮಾಹಿತಿ ತಿಳಿಯುತ್ತಿದ್ದಂತೆ ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ್ ಕಲ್ಗುಜ್ಜಿ, ಹೊಸನಗರ ಸಿಪಿಐ ಗುರುಣ್ಣ ಎಸ್ ಹೆಬ್ಬಾಳ್ ದೌಡಾಯಿಸಿದ್ದಾರೆ. ಬಳಿಕ ಮೃತನ ಶವ 100 ಅಡಿ ಕೆಳಭಾಗದಲ್ಲಿ ಪತ್ತೆಯಾಗಿದ್ದು ಅಗ್ನಿಶಾಮಕ ದಳ ಮತ್ತು ಸ್ಥಳೀಯರ ಸಹಕಾರದಿಂದ ಹಗ್ಗದ ಮೂಲಕ ಮೇಲಕ್ಕೆತ್ತಲಾಯಿತು. ಬಳಿಕ ಒಂದು ಕಿಮೀ ಕಡಿದಾದ ರಸ್ತೆಯಲ್ಲಿ ಶವವನ್ನು ಹೊತ್ತುಕೊಂಡೇ ಬಂದು ಮುಖ್ಯರಸ್ತೆಗೆ ತರಲಾಯಿತು. ಬಳಿಕ ಮರಣೋತ್ತರ ಪರೀಕ್ಷೆಗೆ ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಯಿತು.