ಸುದ್ಧಿಕನ್ನಡ ವಾರ್ತೆ
ಶಿರಸಿ: ತನ್ನ ಅನಾರೋಗ್ಯ ನಿರ್ವಹಣೆಗಾಗಿ‌ ಕೂಡಿಟ್ಟ ಹಣವುಳ್ಳ ಚೀಲವನ್ನು
 ಬಸ್ಸಾಸಿನಲ್ಲೇ ಬಿಟ್ಟು ಇಳಿದು ಹೋಗಿದ್ದ ವೃದ್ದೆಯನ್ನು ಹುಡುಕಿ ಅವರಿಗೆ‌ ವಾಯುವ್ಯ ಸಾರಿಗೆ
 ಸಂಸ್ಥೆಯ ಸಿಬಂದಿಯೋರ್ವರು‌‌ ತಲುಪಿಸಿ ಪ್ರಾಮಾಣಿಕತೆ‌ ಮೆರೆದಿದ್ದಾರೆ.
ಹಾವೇರಿ ತಾಲೂಕಿನ ಬಾಳಂಬೀಡ ಗ್ರಾಮದ ಅಕ್ಕಮ್ಮ ಎನ್ನುವ 70 ವರ್ಷದ  ಅನಾರೋಗ್ಯ ಪೀಡಿತ ವಯೋವೃದ್ಧ ಮಹಿಳೆ. ತನ್ನ ಚಿಕಿತ್ಸೆಗಾಗಿ ಉಡುಪಿಯ ಶ್ರೀ ಕೃಷ್ಣ ದೇವಸ್ಥಾನದ ಮುಂದೆ ಅವಲಕ್ಕಿಯನ್ನು ಮಾರಿ ಕೂಡಿಟ್ಟ 9.500 ರೂಪಾಯಿ ಹಣವನ್ನು ಖಾಲಿ ಅಕ್ಕಿ ಚೀಲದಲ್ಲಿ ತನ್ನ ದಿನ ಬಳಕೆ ಬಾಂಡೆ ಸಾಮಾನುಗಳ ಜೊತೆ  ಗಂಟುಕಟ್ಟಿ ಇರಿಸಿ, ತನ್ನೊಂದಿಗೆ ಶಿರಸಿ ಹಾವೇರಿ ಮಾರ್ಗದ ಬಸ್ಸಿನಲ್ಲಿ ಎರಡು ದಿನದ ಹಿಂದೆ ಪ್ರಯಾಣಿಸಿದ್ದರು. ಅಂದು ಇಳಿಯುವ ಗಡಿಬಿಡಿಯಲ್ಲಿ  ಚೀಲವನ್ನು ಬಸ್ಸಿನಲ್ಲಿಯೇ ಮರೆತು ಬಿಟ್ಟು ಇಳಿದಿದ್ದರು.
ಗಂಟುಕಟ್ಟಿದ ಈ ಚೀಲವನ್ನು ಗಮನಿಸಿದ ಶಿರಸಿ ಹಾವೇರಿ ವಾಹನದ ಖಾಯಂ ನಿರ್ವಾಹಕ ಮಹಮ್ಮದ್ ಗೌಸ್ ನದಾಫ್  ಅವರು ಚೀಲವನ್ನು ಜತನದಿಂದ ಕಾಪಾಡಿ ಅದರಲ್ಲಿರುವ ಪಡಿತರ ಚೀಟಿಯಲ್ಲಿನ ವಿಳಾಸದ ಆಧಾರದ ಮೇಲೆ ಮೂಲ ವಾರಸುದಾರರನ್ನು ಪತ್ತೆ ಮಾಡಿ, ಅತ್ಯಂತ ಕಷ್ಟದಲ್ಲಿದ್ದ ಮಹಿಳೆಗೆ ಮರಳಿ ಸಿಗುವಲ್ಲಿ ಯಶಸ್ಸಾದರು.
ಕಡು ಬಡತನದಲ್ಲಿರುವ ಈ ವೃದ್ಧೆ  ಹಣ ಹಾಗೂ ಸಾಮಾನುಗಳನ್ನು ಮರಳಿ ಪಡೆದು, ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ನಿರ್ವಾಹಕನ ಪ್ರಾಮಾಣಿಕತೆಗೆ ವಾಯುವ್ಯ ಸಾರಿಗೆ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ