ಸುದ್ದಿ ಕನ್ನಡ ವಾರ್ತೆ
ಶಿರಸಿ: ನದಿ ತಿರುವು ಯೋಜನಾ ವಿರೋಧಿ ಹೋರಾಟವನ್ನು ತೀವ್ರಗೊಳಿಸುವದು ಅನಿವಾರ್ಯ ಎಂದು
ಶ್ರೀಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಯವರು ಕರೆ ನೀಡಿದ್ದಾರೆ.
ಅವರು ಸ್ವರ್ಣವಲ್ಲೀ ಮಠದಲ್ಲಿ ಬೇಡ್ತಿ,ಅಘನಾಶಿನಿ ನದಿತಿರುವು ಯೋಜನೆ ವಿರೋಧಿಸಿ ನಡೆದ ವಿಶೇಷ ಸಭೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡುತ್ತಿದ್ದರು.
ಈ ಸಂದರ್ಭದಲ್ಲಿ ಚಳವಳಿ ತೀವ್ರಗೊಳಿಸುವ ಪ್ರಸ್ತಾಪಗಳು ವ್ಯಕ್ತವಾದವು. ಇದರ ಬೆನ್ನಲ್ಲೆ ತಮ್ಮ ನಿಲುವು ವಿವರಿಸಿದ ಶ್ರೀಗಳು, ಸಮರೋಪಾದಿಯಲ್ಲಿ ನಮ್ಮ ಚಳವಳಿಯನ್ನು ತೀವ್ರಗೊಳಿಸಬೇಕಿದೆ. ಮುಖ್ಯವಾಗಿ ಕರಾವಳಿ ಭಾಗದ ಜನರು ಸಂಪೂರ್ಣ ಕೈಜೋಡಿಸಿ ಕೊಂಡು ಇದನ್ನು ಯಶಸ್ವಿಗೊಳಿಸಬೇಕಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಬೆಂಗಳೂರಿನಲ್ಲಿ ಏನ್ ಡಬ್ಲ್ಯೂಡಿಎ ವಿಜ್ಞಾನಿ ಗಳೊಂದಿಗೆ ನಡೆದ ಚರ್ಚೆಯಲ್ಲಿ ನಮ್ಮ ನಿಯೋಗದಲ್ಲಿದ್ದ ತಜ್ಞರು ಮಂಡಿಸಿದ ಪ್ರಶ್ನೆಗಳಿಗೆ ಸಂಸ್ಥೆಯ ವಿಜ್ಞಾನಿಗಳು ನಿರುತ್ತರರಾದರು ಎಂದರು. ಕರಾವಳಿ ಭಾಗದಲ್ಲಿ ಜನಜಾಗೃತಿ ಕೈಗೊಂಡ ಪ್ರಮುಖರಾದ ವಿಶ್ವನಾಥ ಶೀಗೆಹಳ್ಳಿ ಮತ್ತು ಪ್ರಮೋದ್ ವೈದ್ಯ ಮತ್ತಿಘಟ್ಟ ಮಾತನಾಡಿ, ಕರಾವಳಿ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ಇದ್ದು, ಉತ್ತಮ ಬೆಂಬಲದ ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಶ್ರೀಮಾನ್ ನೆಲೆಮಾವು ಮಠದ ಅಧ್ಯಕ್ಷ ಜಿ.ಎಂ. ಹೆಗಡೆ ಹೆಗ್ನೂರು, ಹಿರಿಯ ಸಹಕಾರಿ ಎನ್ .ವಿ ಹೆಗಡೆ ಮುತ್ತಿಗೆ, ಜಿ. ಆರ್ .ಹೆಗಡೆ ಬೆಳ್ಳೆಕೆರಿ, ಶಿವಾನಂದ ಕಳವೆ, ಎಂ .ಕೆ. ಭಟ್ ಯಡ್ಹಳ್ಳಿ ರಾಘವೇಂದ್ರ ಭಟ್ಟ ಹಾಸಣಗಿ, ನರಸಿಂಹ ಸಾತೊಡ್ಡಿ, ಜಿ .ಎನ್ ಹೆಗಡೆ ಕಣ್ಣಿಮನೆ ತಮ್ಮ ಅಭಿಪ್ರಾಯ ಮಂಡಿಸಿದರು.
ಚಳವಳಿಯನ್ನು ವ್ಯವಸ್ಥಿತವಾಗಿ ನಡೆಸುವುದರ ಜೊತೆಗೆ ಕಾನೂನು ಹೋರಾಟವನ್ನು ನಡೆಸಲು ಸಭೆ ತೀರ್ಮಾನಿಸಿತು. ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಒಮ್ಮತದಿಂದ ಡಿಪಿಆರ್ ಮಾಡದಂತೆ ತಮ್ಮ ಗಟ್ಟಿತನ ತೋರ್ಪಡಿಸಬೇಕೆಂದು ಸಭೆಯಲ್ಲಿ ಓಕ್ಕೊರಲ ಆಗ್ರಹ ಕೇಳಿ ಬಂತು.
