ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ-ಬೆಳಗಾವಿ ಸಂಪರ್ಕಿಸುವ ಮುಖ್ಯ ಹೆದ್ದಾರಿ ಅನ್ಮೋಡ ಘಾಟ್ ರಸ್ತೆ ದುರಸ್ತಿ ಮತ್ತು ಅಗಲೀಕರಣ ಕಾಮಗಾರಿ ವಿಳಂಭವಾಗುತ್ತಿದೆ. ಇದರಿಂದಾಗಿ ಈ ಎರಡೂ ರಾಜ್ಯಗಳ ನಡುವಿನ ಸಕರು ಸಾಗಾಣೆ 100 ರಿಂದ 150 ಕಿಮಿ ಹೆಚ್ಚುವರಿ ಮಾರ್ಗ ಬದಲಾವಣೆ ಮಾಡಬೇಕಾಗಿದೆ, ಇದರಿಂದಾಗಿ ಸಾರಿಗೆ ವೆಚ್ಚವೂ ಹೆಚ್ಚಲಿದೆ. ಇದರಿಂದಾಗಿ ಗೋವಾ ಮತ್ತು ಕರ್ನಾಟಕದ ಕೈಗಾರಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಗೋವಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಅಧ್ಯಕ್ಷೆ ಪ್ರತಿಮಾ ದೋಂಡ ರವರು ಈ ಕುರಿತಂತೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡಸುವಂತೆ ಗೋವಾ ಮತ್ತು ಬೆಳಗಾವಿ ಚೇಂಬರ್ ಗಳಿಗೆ ಮನವಿ ಮಾಡಿದ್ದಾರೆ.

ಬೆಳಗಾವಿ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಅನ್ಮೋಡ ಘಾಟ್ ನಲ್ಲಿ ವಾಹನ ಸಂಚಾರ ದಟ್ಟಣೆಯು ಬೆಳಗಾವಿಯ ಬೆಗಾವಿಯ ಉದ್ಯಮ ಮತ್ತು ಗೋವಾದ ಸಂಸ್ಕರಣಾ ಕೈಗಾರಿಕೆಗಳಲ್ಲಿನ ಕಚ್ಚಾವಸ್ತುಗಳ ಪೂರೈಕೆಯ ಮೇಲೆ ಪರಿಣಾಮ ಬೀರುತ್ತಿದೆ. ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ 4ಎ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬೇಕು. ಗೋವಾ -ಬೆಳಗಾವಿ ಆರ್ಥಿಕ ಕಾರಿಡಾರ್ ಮಾಡಲು ಈ ಎರಡೂ ಚೇಂಬರ್ ಗಳು ಆಯಾ ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸಬೇಕಿದೆ ಎಂದು ಪ್ರತಿಮಾ ದೋಂಡ ಮನವಿ ಮಾಡಿದ್ದಾರೆ.

ಕರ್ನಾಟಕ ಗೋವಾ ನಡುವೆ ಪ್ರತಿದಿನ ಪ್ರಯಾಣೀಸುವ ವ್ಯಾಪಾರಿಗಳು, ಉದ್ಯೋಗಿಗಳು ಮತ್ತು ಪ್ರವಾಸಿಗರ ಖಾಸಗಿ ವಾಹನಗಳ ವಿರುದ್ಧ ತೆಗೆದುಕೊಳ್ಳಲಾಗುತ್ತಿರುವ ದಂಡದ ಕ್ರಮ ಮತ್ತು ಗಡಿ ತಪಾಸಣೆಯ ತೊಂದರೆ ಬಗ್ಗೆ ಕೂಡ ಪ್ರತಿಮಾ ದೋಂಡ ಕಳವಳ ವ್ಯಕ್ತಪಡಿಸಿದರು. ಕಾನೂನು ಬದ್ಧ ಪ್ರಯಾಣಿಕರಿಗೆ ಉಂಟಾಗುತ್ತಿರುವ ಅನಾನುಕೂಲತೆಯನ್ನು ತಪ್ಪಿಸಲು , ಆಡಳಿತಾತ್ಮಕ ಸಮಸ್ಯೆ ತೆಗೆದುಹಾಕಲು ಎರಡೂ ರಾಜ್ಯಗಳ ಸಾರಿಗೆ ಅಧಿಕಾರಿಗಳನ್ನೊಳಗೊಂಡ ಡಿಜಿಟಲ್ ಕ್ಲೀಯರೆನ್ಸ ವ್ಯವಸ್ಥೆ ಮತ್ತು ಜಂಟಿ ಕುಂದುಕೊರತೆಗಳ ಪರಿಹಾರ ಕೇಂದ್ರ ಸ್ಥಾಪಿಸಬೇಕು ಎಂದು ಪ್ರತಿಮಾದೋಂಡ ಮನವಿ ಮಾಡಿದರು.