ಸುದ್ದಿ ಕನ್ನಡ ವಾರ್ತೆ

ಕಾರವಾರ:ಉತ್ತರಕನ್ನಡ ಜಿಲ್ಲೆಯಾದ್ಯಂತ ಅನೇಕ ಕಡೆ ಗುರುವಾರ ಸಂಜೆ ಏಕಾಏಕಿ ಸುರಿದ ಮುಂಗಾರು ಪೂರ್ವ ಗುಡುಗು ಮಿಂಚು ಸಹ ಗಾಳಿ ಮಳೆಯು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಹಳಿಯಾಳ, ಜೊಯಿಡಾ, ಯಲ್ಲಾಪುರ ಸೇರಿದಂತೆ ಹಲವು ತಾಲೂಕುಗಳಲ್ಲಿ ಗಾಳಿಯ ರಭಸಕ್ಕೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಪೂರೈಕೆ,ರಸ್ತೆಯ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡು ಸಾರ್ವಜನಿಕರು ತೊಂದರೆ ಅನುಭವಿಸಿದರು.ಜೋಯಿಡಾ ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ ವ್ಯಾಪ್ತಿಯ ಬಾಮಣಗಿ ಗ್ರಾಮದ ಶಿವಾಜಿ ಶಂಕರ ನಾಯ್ಕ ಎಂಬುವವರ ಗುರುವಾರ ಸಂಜೆ ಸುಮಾರು 5 ಗಂಟೆಗೆ ಬೀಸಿದ ಬಲವಾದ ಗಾಳಿಯಿಂದ ದನಗಳ ಕೊಟ್ಟಿಗೆಯ ಮೇಲ್ಬಾವಣಿ ಶೀಟ್ ಸಂಪೂರ್ಣವಾಗಿ ಹಾರಿ ಹೋಗಿ ಹಾನಿಯಾಗಿದೆ. ಅವರಿಗೆ ಸೇರಿದ ಕೊಟ್ಟಿಗೆಯಲ್ಲಿ ದನಕರುಗಳು ಇದ್ದರೂ ಅದೃಷ್ಟವಶಾತ್ ಯಾವುದೇ ಗಾಯಗಳಾಗಿಲ್ಲ. ಘಟನೆಯಿಂದ ಸಾಕುಪ್ರಾಣಿಗಳಿಗೆ ತಾತ್ಕಾಲಿಕ ತೊಂದರೆ ಉಂಟಾಗಿದೆ. ಸ್ಥಳೀಯರು ಹಾನಿಯಾದ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಜಿಲ್ಲೆಯಾದ್ಯಂತ ಗಾಳಿ ಸಹಿತ ಮಳೆಯ ಪರಿಣಾಮವಾಗಿ ರಸ್ತೆಯ ಸಂಚಾರ ವ್ಯತ್ಯಯ, ವಿದ್ಯುತ್‌ ವ್ಯತ್ಯಯ, ಸಣ್ಣ ಮಟ್ಟದ ಆಸ್ತಿ ಹಾನಿ ಹಾಗೂ ಕೃಷಿ ಭೂಮಿಗಳಿಗೆ ಹಾನಿಯ ಭೀತಿ ಉಂಟಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಅಧಿಕಾರಿಗಳು ಮುನ್ನಚ್ಚೇರಿಕೆಯನ್ನು ನೀಡಿದ್ದಾರೆ.