ಸುದ್ದಿ ಕನ್ನಡ ವಾರ್ತೆ
ಶಿರಸಿ: ಮಕ್ಕಳು ಮತ್ತು
ಮಹಿಳೆಯರಿಗೆ ಯಕ್ಷಗಾನ ಕಲಿಸಿ, ಈ ಕಲೆಯ ರಕ್ಷಣೆಗೆ ಶ್ರಮಿಸುತ್ತಿರುವ ಇಲ್ಲಿಯ ಯಕ್ಷ ಕಲಾ ಸಂಗಮದ ವಾರ್ಷಿಕೋತ್ಸವ ನಗರದ ರಂಗಧಾಮದಲ್ಲಿ ಬುಧವಾರ ನಡೆಯಿತು. ಸಾಧಕರಿಗೆ ಸನ್ಮಾನ, ಯಕ್ಷಗಾನ ಪ್ರದರ್ಶನದ ಮೂಲಕ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮ ಉದ್ಘಾಟಿಸಿ ನಿವೃತ್ತ ಸೈನಿಕ ಮೇ. ಗಣಪತಿ ಹೆಗಡೆ ಮಾತನಾಡಿ ಭಾರತ ಸಾವಿರ ಸಾವಿರ ವರ್ಷಗಳ ಸಂಸ್ಕೃತಿ ಹೊಂದಿರುವ ದೇಶ. ಇಡೀ ದೇಶಾದ್ಯಂತ ಎಲ್ಲ ಕಡೆ ಪೌರಾಣಿಕ ಕಥೆಗಳ ಮನನ ಸಮಾನವಾಗಿದೆ. ಅನಾದಿ ಕಾಲದಿಂದಲೂ ನಮ್ಮ ಪೌರಾಣಿಕ ಸಂಗತಿಗಳನ್ನು ಯುವ ಪೀಳಿಗೆಗೆ ದಾಟಿಸುವಲ್ಲಿ ಕಲೆ ಪ್ರಮುಖ ಪಾತ್ರ ವಹಿಸಿದೆ.
ಯಕ್ಷಗಾನ ಕಲೆ ಮೂಲಕ ನಾವು ನೋಡಿದ, ಕೇಳಿದ ಪೌರಾಣಿಕ ಸಂಗತಿಗಳು ನಮ್ಮ ಜೀವನದುದ್ದಕ್ಕೂ ನೆನಪಿರುತ್ತವೆ. ಸೈನಿಕರು ಕೇವಲ ನಮ್ಮ ಗಡಿಗಳನ್ನು ಮಾತ್ರ ಕಾಯುತ್ತಿಲ್ಲ. ನಮ್ಮ
ದೇಶದ ಸಂಸ್ಕೃತಿಯನ್ನು, ವೈವಿಧ್ಯತೆಯನ್ನೂ ರಕ್ಷಿಸುತ್ತಿದ್ದಾರೆ. ನಮ್ಮನಾಡಿನ ಸಂಸ್ಕೃತಿಗಳು ಸೈನಿಕನಿಗೂ ಬಲ ತುಂಬಿವೆ ಯಕ್ಷಗಾನ ಮತ್ತು ತಾಳಮದ್ದಲೆ ಗಟ್ಟಿಯಾದ ವ್ಯಕ್ತಿತ್ವ
ಹೊರ ತರುವ ಕಲೆಯಾಗಿದೆ ಎಂದರು.
ಇದೇ ವೇಳೆ ನಿವೃತ್ತ ಶಿಕ್ಷಕಿ ಮತ್ತು ಯಕ್ಷಗಾನ ಕಲಾ ಪೋಷಕಿ ತುಂಗಭದ್ರಾ ಹೆಗಡೆ ಕುಂದಾಪುರ ಅವರನ್ನು ಸನ್ಮಾನಿ ಸಲಾಯಿತು. ಸನ್ಮಾನ ಸ್ವೀಕರಿಸಿ ತುಂಗಭದ್ರಾ ಹೆಗಡೆ ಮಾತನಾಡಿ, ಯಕ್ಷಗಾನದಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಆಗುತ್ತದೆ. ಮಾತುಗಾರಿಕೆಯ ಮೂಲದ ಮಾನಸಿಕ ಪ್ರಗತಿ, ನೃತ್ಯ ಹಾವ ಭಾವದಿಂದ ದೈಹಿಕ ಪ್ರಗತಿ ಸಾಧ್ಯವಾಗುತ್ತದೆ ಎಂದರು.
ನಿವೃತ್ತ ಯೋಧ ಶ್ರೀಪಾದ ಭಟ್ ಇದ್ದರು. ಪ್ರಗತಿಪರ ಕೃಷಿಕ ವೇದಾ ಹೆಗಡೆ ನೀರ್ನಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯಕ್ಷ ಕಲಾ ಸಂಗಮದ ಅಧ್ಯಕ್ಷೆ ಸುಮಾ ಗಡಿಗೆಹೊಳೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರೇಮಾ ಭಟ್ ಇತರರಿದ್ದರು.
