ಸುದ್ದಿ ಕನ್ನಡ ವಾರ್ತೆ
ಶಿರಸಿ:ವಿದ್ಯಾಧರ ಕನ್ನಡ ಪ್ರತಿಷ್ಠಾನ ಮಹಾರಾಷ್ಟ್ರ-ಕರ್ನಾಟಕ-ತೆಲಂಗಾಣ), ಶಿರಸಿಯ ಪ್ರಜ್ವಲ ಟ್ರಸ್ಟ್ ಸಂಯುಕ್ತ ಅಶ್ರಯದಲ್ಲಿ ನೀಡಲಾಗುವ ಪ್ರತಿಷ್ಠಿತ ‘ಯುವ ಪ್ರತಿಭಾ ದೀಸ್ತಿ’ (ರಂಗ ಕಲಾ ಕ್ಷೇತ್ರ-2025) ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಪ್ರತಿಭಾನ್ವಿತ ಯುವಕ ರಾಕೇಶ್ ಆರ್. ಭಟ್ ಭಾಜನ ರಾಗಿದ್ದಾರೆ. ಮಾತೋಶ್ರೀ ಜಾನಕಿ ಬಾಯಿ ರಂಗರಾವ ಮುತಾಲಿಕ ದೇಸಾಯಿ ಅವರ ಸಂಸ್ಕರಣಾರ್ಥ ಹಮ್ಮಿಕೊಳ್ಳಲಾಗಿದ್ದ ‘ಕನ್ನಡ ನುಡಿ ತೇರು-2026’ ಕಾರ್ಯಕ್ರಮ ದಲ್ಲಿ ಈ ಗೌರವವನ್ನು ಸಮರ್ಪಿಸಲಾಯಿತು.

ಪಟ್ಟಣದ ರಂಗಧಾಮದಲ್ಲಿ ಇತ್ತೀಚಿಗೆ ಜರುಗಿದ ಸಮಾರಂಭದಲ್ಲಿ ರಾಕೇಶ್ ಭಟ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ
ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ರಾಕೇಶ್ ಭಟ್ ಅವರ ನಿರ್ದೇಶನದಲ್ಲಿ ಸಿದ್ದಗೊಂಡ, ವಾಸ್ತವದ ಪ್ರತಿಬಿಂಬವಾದ ‘ಪ್ರಸ್ತುತ’ ಎಂಬ ಕಿರು ನಾಟಕವನ್ನು ಎಂ.ಇ.ಎಸ್.ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಭಿನಯಿಸಿದರು. ಜನರ ಮನ ಮಿಡಿಯುವಲ್ಲಿ ಯಶಸ್ವಿಯಾದ ಈ ನಾಟಕವು ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾಧರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ವಿದ್ಯಾಧರ ಮುತಾಲಿಕ ದೇಸಾಯಿ, ಶಿರಸಿ ಪ್ರಜ್ವಲ ಟ್ರಸ್ಟ್ ಅಧ್ಯಕ್ಷರಾದ ಬಿಂದು ಹೆಗಡೆ, ಬೆಳಗಾವಿಯ ವಾಣಿಜ್ಯ ತೆರಿಗೆ ಅಧಿಕಾರಿಗಳಾದ ಸುರೇಶ ಕೋರಕೊಪ್ಪ, ಹಿರಿಯ ಸಾಹಿತಿ ಸ.ರಾ. ಸುಳುಕೂಡೆ ಮುಂತಾದವರಿದ್ದರು.