ಸುದ್ದಿ ಕನ್ನಡ ವಾರ್ತೆ
ಮೈಸೂರು : ಹುಣಸೂರು ತಾಲೂಕಿನ ದೊಡ್ಡಹೆಟ್ಟೂರು ಗ್ರಾಮದಲ್ಲಿ ಮನೆಯಲ್ಲಿ ಪೂಜೆಗೆ ಇಟ್ಟಿದ್ದ ದಾಸವಾಳದ ಹೂವನ್ನು ಏಳು ತಿಂಗಳ ಮಗುವೊಂದು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದ್ದು, ಎಲ್ಲರ ಕಣ್ಣು ಕಂಬನಿ ಮಿಡಿಯುವಂತಹ ಘಟನೆ ನಡೆದಿದೆ.ಚಿನ್ಮಯ್ ಗೌಡ ಎಂದು ಗುರುತಿಸಲಾದ ಶಿಶು ಶನಿವಾರ ತನ್ನ ಅಣ್ಣನೊಂದಿಗೆ ಆಟವಾಡುತ್ತಿತ್ತು.ಆ ಸಮಯದಲ್ಲಿ, ಮಗು ಮನೆಯ ಪ್ರವೇಶದ್ವಾರದಲ್ಲಿ ಇಟ್ಟಿದ್ದ ಒಣಗಿದ ಹೂವನ್ನು ಎತ್ತಿಕೊಂಡು ಅದರ ಒಂದು ತುಂಡನ್ನು ಬಾಯಿಗೆ ಹಾಕಿಕೊಂಡಿದೆ ಎಂದು ತಿಳಿದುಬಂದಿದೆ. ಆತನ ಅಣ್ಣ ಅದನ್ನು ತಕ್ಷಣವೇ ತೆಗೆದುಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಯಾಕೆಂದರೆ ಶಿಶು ಅದನ್ನು ಅದಾಗಲೇ ನುಂಗಿತ್ತು. ಕಂದಮ್ಮ ಉಸಿರಾಡಲು ಕಷ್ಟಪಡುತ್ತಿರುವುದನ್ನು ಗಮನಿಸಿದ ತಕ್ಷಣ, ಮಗುವನ್ನು ಪ್ರಥಮ ಚಿಕಿತ್ಸೆಗಾಗಿ ಹನಗೋಡು ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ವೈದ್ಯಕೀಯ ಎಲ್ಲಾ ರೀತಿಯ ಪ್ರಯತ್ನಗಳ ಹೊರತಾಗಿಯೂ, ಮಗುವನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ತಿಳಿದುಬಂದಿದೆ.
