ಸುದ್ದಿ ಕನ್ನಡ ವಾರ್ತೆ
ಹೊನ್ನಾವರ: ತಾಲೂಕಿನ ಕೆಳಗಿನ ಮೂಡ್ಕಣಿ ಗ್ರಾಮದ ನಿವಾಸಿಯಾದ ಬಸ್ಟ್ಯಾಂವ ಡಯಾಸ್ ದಂಪತಿಗಳ ಪುತ್ರಿ ಮಾಪ್ರೇಡ್ ಡಯಾಸ್ ಇವರು ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.
ಬಡತನದಲ್ಲಿ ಬೆಳೆದ ಮಾಪ್ರೇಡ್ ಡಯಾಸ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಣವನ್ನು ಕೆಳಗಿನ ಮೂಡ್ಕಣಿ ಶಾಲೆಯಲ್ಲಿ ಮುಗಿಸಿ, ನಂತರ ಪ್ರೌಢಶಾಲೆಯ ಶಿಕ್ಷಣವನ್ನು ಜಳವಳ್ಳಿ ಪ್ರೌಢ ಶಾಲೆಯಲ್ಲಿ ಪಡೆದು, ಪದವಿ ಶಿಕ್ಷಣವನ್ನು ಹೊನ್ನಾವರ ಎಸ್.ಡಿ.ಎಮ್. ಕಾಲೇಜಿನಲ್ಲಿ ಮುಗಿಸಿದ ನಂತರ ಕಾನೂನು ಶಿಕ್ಷಣವನ್ನು ಉಡುಪಿಯಲ್ಲಿ ಪಡೆದರು.
ಇತ್ತೀಚೆಗೆ ನಡೆದ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ಮೊದಲ ಹಂತದಲ್ಲಿಯೇ ತೇರ್ಗಡೆಗೊಂಡು ಸರ್ಕಾರಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.
ಮಾಪ್ರೆಡ್ ಡಯಾಸ ಅವರು ಕಳೆದ ಡಿಸೆಂಬರ್ ತಿಂಗಳಲ್ಲಿ ಹೊನ್ನಾವರ ಪಟ್ಟಣದ ಗಾಂಧಿ ನಗರದ ನಿವಾಸಿ, ಇಗ್ನೇಷಿಯಸ್ ಆಸ್ಪತ್ರೆಯ ನರ್ಸಿಂಗ್ ಕಾಲೇಜಿನ ಬಸ್ ಚಾಲಕರಾಗಿರುವ ಜೋಸೆಫ್ ಫರ್ನಾಂಡಿಸ್ ದಂಪತಿ ಪುತ್ರನನ್ನು ವಿವಾಹವಾಗಿ ಈಗ ಹೊನ್ನಾವರ ನಿವಾಸಿಯಾಗಿದ್ದಾರೆ. ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ಊರ ನಾಗರೀಕರು ಮತ್ತು ಸಂಬಂಧಿಗಳು ನ್ಯಾಯಾಧೀಶರಾಗಿ ನೇಮಕಗೊಂಡಿರುವ ಮಾಪ್ರೆಡ್ ಅವರನ್ನು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.
