ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಪಟ್ಟಣದಲ್ಲಿ ಫೆ. 11ರಿಂದ ಆರಂಭವಾಗುವ ಯಲ್ಲಾಪುರ ಗ್ರಾಮದೇವಿ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಜಾತ್ರಾ ಸಿದ್ಧತೆಗಳು ಪೂರ್ಣಗೊಳ್ಳುತ್ತಿದ್ದು ಜಾತ್ರಾ ವೈಭವವನ್ನು ಕಣ್ಣುಂಬಿಸಿಕೊಳ್ಳಲು ಲಕ್ಷಾಂತರ ಭಕ್ತರು ಕಾತುರರಾಗಿದ್ದಾರೆ.
ಯಲ್ಲಾಪುರ ಜಾತ್ರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಜಾತ್ರಾ ಗದ್ದುಗೆಯ ಮಂಟಪವನ್ನು ಈಬಾರಿ ಅತ್ಯಾಕರ್ಷಕವಾಗಿ ಸಿದ್ಧಪಡಿಸಲಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ 30 ಕ್ಕೂ ಹೆಚ್ಚು ಕುಶಲಕರ್ಮಿಗಳು ಸ್ಥಳೀಯ ಸ್ವಯಂ ಸೇವಕರ ಸಹಕಾರದೊಂದಿಗೆ ಜಾತ್ರಾ ಮಂಟಪದ ಸಿದ್ಧತೆಯಲ್ಲಿ ತೊಡಗಿದ್ದಾರೆ. 6600 ಚ.ಅಡಿಯ ವಿಸ್ತೀರ್ಣದ ಜಾತ್ರಾಮಂಟಪವು, ಕಂಚಿ ದೇವಾಲಯದ ಮಾದರಿಯಲ್ಲಿ ನಿರ್ಮಾಣವಾಗಿದ್ದು, ಜಾತ್ರಾಮಂಟಪದಲ್ಲಿ ಹೋಯ್ಸಳ ಶಿಲ್ಪಕಲಾ ಮಾದರಿಗಳು ಕಣ್ಮನ ಸೆಳೆಯುತ್ತಿವೆ.
ವಿಶಾಲವಾದ ಜಾತ್ರಾ ಮಂಟಪದ ಒಳಭಾಗದ ಇಕ್ಕೆಲಗಳಲ್ಲಿ ವಿಷ್ಣುವಿನ ದಶಾವತಾರ ಶಿಲ್ಪಗಳು, ದೇವಿಯ ನವದುರ್ಗಾ ಕಲಾಕೃತಿಗಳು, ವಿಶೇಷ ವಿದ್ಯುದ್ದೀಪಾಲಂಕಾರ ಮನಮೋಹಕವಾಗಿವೆ.

ಸಾಗರದ ಸಾಗರಿಕಾ ಈವೆಂಟ್ಸ್ ನವರು ಜಾತ್ರಾಮಂಟಪವನ್ನು ಸಿದ್ಧಪಡಿಸಿದ್ದಾರೆಜಾತ್ರಾ ಮಂಟಪದಲ್ಲಿ ದೇವರ ದರ್ಶನಕ್ಕೆ ಸಾಗಲು ಭಕ್ತರಿಗೆ ಸೂಕ್ತ ವ್ಯವಸ್ಥೆ ಸೇವಾ ಕೌಂಟರ್ ಗಳು, ಸಿ.ಸಿ.ಕ್ಯಾಮರಾ, ಸೂಕ್ತ ಭದ್ರತಾ ವ್ಯವಸ್ಥೆ ಉಚಿತ ಪಾನೀಯ ವ್ಯವಸ್ಥೆ ಮಾಡಲಾಗಿದೆ.
ಈ ಬಾರಿಯ ಯಲ್ಲಾಪುರ ಜಾತ್ರಾ ಮಂಟಪವು ಅತ್ಯಾಕರ್ಷಕವಾಗಿ ನಿರ್ಮಾಣವಾಗಿದ್ದು, ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುವಂತಾಗಿದೆ.
