ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ ವ್ಯಾಪ್ತಿಯ ಗವೇಗಾಳಿ ಮತ್ತು ಬಾಮಣಗಿ ಗ್ರಾಮದ ಸಾರ್ವಜನಿಕರಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಹಳಷ್ಟು ವರ್ಷಗಳಿಂದ ಸ್ಥಗಿತಗೊಂಡಿದ್ದ ಸಾರಿಗೆ ಸಂಸ್ಥೆಯ ಬಸ್ ಸೌಲಭ್ಯವು ಸೋಮವಾರ ಪುನಾರಂಭಗೊಂಡಿದೆ. ಗ್ರಾಮಕ್ಕೆ ಆಗಮಿಸಿದ ವಾಯವ್ಯ ಕರ್ನಾಟಕ ಸಾರಿಗೆ ಬಸ್ಸಿಗೆ ಗ್ರಾಮಸ್ಥರೆಲ್ಲರೂ ಸೇರಿ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಹಾಗೂ ಆರತಿ ಬೆಳಗುವ ಮೂಲಕl ಸಡಗರದಿಂದ ಸ್ವಾಗತಿಸಿದರು.
ಹಿಂದೆ ಇದ್ದ ಬಸ್ ಕೆಲ ವರ್ಷಗಳಿಂದ ಬಂದಾಗಿತ್ತು, ಆಗ ಈ ಮಾರ್ಗದಲ್ಲಿ ಬಸ್ ಬರದೇ ಇದ್ದ ಕಾರಣ, ಗ್ರಾಮದ ಶಾಲಾ ಮಕ್ಕಳು ಹಾಗೂ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ತೀವ್ರ ತೊಂದರೆ ಮತ್ತು ಕಷ್ಟಗಳನ್ನು ಅನುಭವಿಸುತ್ತಿದ್ದರು. ದಾಂಡೇಲಿ ಹಾಗೂ ಜೊಯಿಡಾ ಕಡೆಗೆ ದಿನನಿತ್ಯ ಪ್ರಯಾಣಿಸುವ ಸಾರ್ವಜನಿಕರಿಗೂ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿತ್ತು. ಗ್ರಾಮಸ್ಥರು ಈ ಕುರಿತು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಮನವಿಯನ್ನು ಸಲ್ಲಿಸಿದ್ದರು . ಗ್ರಾಮಸ್ಥರ ನ್ಯಾಯಯುತ ಮನವಿಯನ್ನು ಸ್ವೀಕರಿಸಿದ ಇಲಾಖೆಯ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ, ಇಂದಿನಿಂದ ಮತ್ತೆ ಬಸ್ ಸಂಚಾರವನ್ನು ಆರಂಭಿಸಿದ್ದಾರೆ.
ಗ್ರಾಮಕ್ಕೆ ಬಸ್ ಸೌಲಭ್ಯವನ್ನು ಮರಳಿ ತರುವಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಗಣಪತಿ ಗಾವಡಾ ಅವರು ಪ್ರಮುಖ ನೇತೃತ್ವ ವಹಿಸಿದ್ದರು. ಅವರ ನಿರಂತರ ಶ್ರಮ ಮತ್ತು ಕಾಳಜಿಯ ಫಲವಾಗಿ ಇಂದು ಈ ಭಾಗದ ಜನರಿಗೆ ಸಾರಿಗೆ ಸೌಲಭ್ಯ ಲಭಿಸುವಂತಾಗಿದೆ. ಇವರ ಈ ಜನಪರ ಕಾರ್ಯಕ್ಕೆ ಗವೇಗಾಳಿ ಹಾಗೂ ಬಾಮಣಗಿ ಗ್ರಾಮದ ಸಮಸ್ತ ಜನತೆ, ಶಾಲಾ ಸಮಸ್ತ್ರ ಧರಿಸಿದ ವಿದ್ಯಾರ್ಥಿ ವೃಂದದವರು ತಮ್ಮ ವೈಯಕ್ತಿಕ ಪರವಾಗಿ ಹಾಗೂ ಗ್ರಾಮಸ್ಥರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಬಸ್ಸಿನ ಚಾಲಕ ಹಾಗೂ ನಿರ್ವಾಹಕರ ಸಮ್ಮುಖದಲ್ಲಿ ನಡೆದ ಸರಳ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಊರಿನ ಹಿರಿಯರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.,
ಈ ಸಂದರ್ಭದಲ್ಲಿ ಗ್ರಾಮದ ಮುಖ್ಯಸ್ಥರಾದ ಗಣಪತಿ ಗಾವಡಾ, ಸಂಜುಮಿರಾಶಿ,ಸೀತಾರಾಮ ಮಿರಾಶಿ,ಮುಕುಂದ ಪಾಟೀಲ್, ಗೋಕುಲದಾಸ್ ಕುಶಲಕರ್,ಪ್ರಭಾಕರ ಅಕೋಡೆಕರ್,ಮೋಹನ ಕುಂಡಲಕರ್,ಗುರುದಾಸ ಬಾಳೆಕರ,ಶ್ರೀಪಾದ ನಾಯ್ಕ, ಅಜಯ ಪಾಟೀಲ್ ಹಾಗೂ ಸ್ಥಳೀಯ ಮಕ್ಕಳು ಸಾರ್ವಜನಿಕರು ಇದ್ದರು.
