ಸುದ್ದಿ ಕನ್ನಡ ವಾರ್ತೆ

. ಹೊನ್ನಾವರ: ತಾಲೂಕಿನ ಹೇರಂಗಡಿ ಸಮೀಪ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಭಾನುವಾರ ವಾಯವ್ಯ ಕರ್ನಾಟಕ ಸಾರಿಗೆ ಬಸ್ ಹಾಗೂ ಓಮಿನಿ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓಮಿನಿ ಚಾಲಕ ಮೃತಪಟ್ಟಿದ್ದಾರೆ.

ಸಿದ್ದಾಪುರ ಮೂಲದ ಇಬ್ರಾಹಿಂ ಮೃತಪಟ್ಟ ಓಮಿನಿ ಚಾಲಕ. ಇವರು ಭಟ್ಕಳದಿಂದ ಸಿದ್ದಾಪುರದ ಕಡೆಗೆ ತಮ್ಮ ಓಮಿನಿ ವಾಹನದಲ್ಲಿ ಚಲಿಸುತ್ತಿದ್ದರು. ಇದೇ ವೇಳೆ ಗೇರುಸೊಪ್ಪದಿಂದ ಹೊನ್ನಾವರದ ಕಡೆಗೆ ಬರುತ್ತಿದ್ದ ಬಸ್ ಹೇರಂಗಡಿ ಸಮೀಪ ಓಮಿನಿ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಓಮಿನಿ ವಾಹನವು ಸಂಪೂರ್ಣವಾಗಿ ಜಖಂಗೊಂಡಿದ್ದು, ಚಾಲಕ ಇಬ್ರಾಹಿಂ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬ೦ದಿದೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.