ಸುದ್ದಿ ಕನ್ನಡ ವಾರ್ತೆ

. ಶಿರಸಿ:ನಗರದ,ಉತ್ತರ ಕನ್ನಡ ಜಿಲ್ಲೆಯ,ವಿಶ್ವವಿಖ್ಯಾತ ಶಕ್ತಿಪೀಠವಾದ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡು, ಜಾತ್ರಾಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.

ಮಂಗಳವಾರ ರಾತ್ರಿ ದೇವಿಯ ವೈಭವದ ಕಲ್ಯಾಣೋತ್ಸವ ನಡೆಯಲಿದೆ. ಈ ಮೂಲಕ ಒಂಬತ್ತು ದಿನಗಳ ಕಾಲ ನಡೆಯುವ ಐತಿಹಾಸಿಕ ಜಾತ್ರೆಗೆ ವಿಧ್ಯುಕ್ತ ಚಾಲನೆ ದೊರೆಯಲಿದೆ.
ಫೆಬ್ರವರಿ 24ರಿಂದ ಮಾರ್ಚ್ 04ರವರೆಗೆ ನಡೆಯುವ ಈ ಅದ್ದೂರಿ ಜಾತ್ರೆಗಾಗಿ ನಗರದ ಬಿಡಕಿಬೈಲಿನಲ್ಲಿರುವ ಜಾತ್ರಾ ಗದ್ದುಗೆಯು ಸರ್ವಾಲಂಕೃತವಾಗಿ ಕಂಗೊಳಿಸುತ್ತಿದೆ. ರಥೋತ್ಸವದ ನಂತರ ದೇವಿ ವಿರಾಜಮಾನವಾಗುವ ಈ ಗದ್ದುಗೆಯನ್ನು ಸುಂದರಗೊಳಿಸುವ ಕಾರ್ಯಪೂರ್ಣಗೊಂಡಿದ್ದು, ಲಕ್ಷಾಂತರ ಭಕ್ತರು ಬಿಸಿಲಿನ ಬೇಗೆಯಿಂದ ರಕ್ಷಣೆ ಪಡೆಯಲು ವಿಶಾಲವಾದ ಚಪ್ಪರಗಳನ್ನು ರಕ್ಷಣೆ ನಿರ್ಮಿಸಲಾಗಿದೆ. ಇಡೀ ನಗರದಾದ್ಯಂತ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಶಿರಸಿ ನಗರವು ಮದುವೆ ಮನೆಯಂತೆ ಕಂಗೊಳಿಸುತ್ತಿದೆ. ನಗರಸಭೆ ವತಿಯಿಂದ ದೇವಿಕೆರೆಯ ದ್ವಾರಬಾಗಿಲು ಹಾಗೂ ಅಂಚೆ ವೃತ್ತದ ಕನ್ನಡಾಂಬೆ ಮೂರ್ತಿಗೆ ಮಾಡಲಾದ ವಿಶೇಷ ದೀಪಾಲಂಕಾರ ಜನಾಕರ್ಷಣೆಯ ಕೇಂದ್ರವಾಗಿದೆ. ಜಾತ್ರೆಯ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಿಗೆ ಮರು ಡಾಂಬರೀಕರಣ ಮಾಡಲಾಗಿದ್ದು, ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಹರಿದುಬರುವ ನಿರೀಕ್ಷೆ ಇರುವುದರಿಂದ ಸೋಮವಾರ ರಾತ್ರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಅವರು ಜಾತ್ರಾ ಗದ್ದುಗೆಗೆ ಭೇಟಿ ನೀಡಿ ಭದ್ರತೆಯ ವ್ಯವಸ್ಥೆಗಳನ್ನು ಪರಿಶೀಲಿಸಿದರು.