ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ: ರಾಜ್ಯ ಬಿಜೆಪಿಯ ಅಧ್ಯಕ್ಷರಾದ ಶ್ರೀ ವಿಜೇಂದ್ರ ಯಡಿಯೂರಪ್ಪ ಅವರು ಯಲ್ಲಾಪುರಕ್ಕೆ ತೆರಳಿ, ವಿವಾಹ ಪ್ರಸ್ತಾವವನ್ನು ತಿರಸ್ಕರಿಸಿದ್ದಕ್ಕೆ ನಡುರಸ್ತೆಯಲ್ಲೇ ಭೀಕರವಾಗಿ ಹತ್ಯೆಯಾದ ರಂಜಿತಾ ಅವರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವಗಳನ್ನು ಸಲ್ಲಿಸಿ, ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಅವರ ಕುಟುಂಬದ ಕಣ್ಣೀರು, ನೋವನ್ನು ಕಂಡು ಮನಸ್ಸು ದುಃಖದಿಂದ ಭಾರವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಈ ಭರಿಸಲಾಗದ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ಮತ್ತು ಧೈರ್ಯ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಅಮಾಯಕ ಹಿಂದೂ ಮಹಿಳೆಯೊಬ್ಬರು ಮದುವೆ ಪ್ರಸ್ತಾಪ ತಿರಸ್ಕರಿಸಿದ ಕಾರಣಕ್ಕಾಗಿ ಹಾಡುಹಗಲೇ ಭೀಕರವಾಗಿ ಕೊಲೆಯಾಗಿರುವುದು ದುರಂತ ಮಾತ್ರವಲ್ಲ, ಆತಂಕಕಾರಿಯೂ ಆಗಿದೆ. ಏಕೆಂದರೆ, ಪದೇ ಪದೇ ಇಂತಹ ಸಮಾಜ ವಿರೋಧಿ ಘಟನೆಗಳು, ಆಘಾತಕಾರಿ ದುಷ್ಕೃತ್ಯಗಳು ನಡೆಯುತ್ತಿದ್ದು, ರಾಜ್ಯದಲ್ಲಿ ಸಂಪೂರ್ಣವಾಗಿ ಕುಸಿದಿರುವ ಕಾನೂನು ಮತ್ತು ಸುವ್ಯವಸ್ಥೆಗೆ ಕನ್ನಡಿ ಹಿಡಿದಿದೆ. ಅಸಮರ್ಥ ಗೃಹ ಸಚಿವರು ಮತ್ತು ದಿಕ್ಕು ತಪ್ಪಿದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ, ಸಮಾಜಘಾತುಕರಿಗೆ, ದುಷ್ಕರ್ಮಿಗಳಿಗೆ ಕಾನೂನಿನ ಭಯವೇ ಇಲ್ಲ, ನಮ್ಮ ಪೊಲೀಸ್ ವ್ಯವಸ್ಥೆ ಹಲ್ಲಿಲ್ಲದ ಹಾವಾದಂತಾಗಿದೆ. ವರ್ಗಾವಣೆ ದಂಧೆ ಹಾಗೂ ಕೀಳು ರಾಜಕೀಯ ಹಿತಾಸಕ್ತಿಗಳಿಗಾಗಿ ಪೊಲೀಸರ ಕೈಕಟ್ಟಿ ಹಾಕಿರುವ ಪರಿಣಾಮವಾಗಿ, ಇಂದು ಅಪರಾಧಿಗಳು ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ತಿರುಗಾಡುವಂತಾಗಿದೆ. ಯಲ್ಲಾಪುರ ಘಟನೆಯು ಮತ್ತೊಮ್ಮೆ ರಾಜ್ಯದಲ್ಲಿ ವಿಶೇಷವಾಗಿ ಹಿಂದೂ ಮಹಿಳೆಯರಿಗೆ ಸುರಕ್ಷತೆ ಇಲ್ಲದಿರುವುದನ್ನು ಒತ್ತಿಹೇಳುತ್ತದೆ, ಜಿಹಾದಿ ಮನಸ್ಥಿತಿ ಬಗ್ಗೆ ಮೃದು ಧೋರಣೆ ಮತ್ತು ಸಹಾನುಭೂತಿ ಹೊಂದಿರುವ ಆಡಳಿತದ ಅಡಿಯಲ್ಲಿ, ಸಮಾಜಘಾತುಕರಿಗೆ ಏನು ಬೇಕಾದರೂ ಮಾಡಬಹುದು ಎನ್ನುವ ಧೈರ್ಯ ಬಂದಿದೆ. ಅಮಾಯಕ ಹಿಂದೂ ಮಹಿಳೆಯರು, ಹೆಣ್ಣು ಮಕ್ಕಳಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.

ಯಾವುದೇ ಗಂಭೀರ ಅಪರಾಧಗಳು ನಡೆದಾಗಲೂ ಕಟ್ಟಕಡೆಗೆ ಮಾಹಿತಿ ಪಡೆಯುವ ವ್ಯಕ್ತಿಯಾಗಿ ಕಾಣಿಸಿಕೊಳ್ಳುವ ಅಸಮರ್ಥ ಗೃಹ ಸಚಿವರು ಮತ್ತು ಕುರ್ಚಿ ಕಾದಾಟದಲ್ಲಿ ಮಗ್ನರಾಗಿರುವ ಮುಖ್ಯಮಂತ್ರಿಗಳ ರಾಜ್ಯದಲ್ಲಿ, ಮಹಿಳೆಯರ ವಿರುದ್ಧದ ಅಪರಾಧಗಳು ಅವರಿಗೆ ಕಾಣುವುದೇ ಇಲ್ಲ. ಪರಿಣಾಮವಾಗಿ, ನಾಗರಿಕರು, ಅದರಲ್ಲೂ ಮಹಿಳೆಯರು ಅಪರಾಧಿಗಳ ಮರ್ಜಿಯಲ್ಲಿ ಬದುಕುವಂತಾಗುತ್ತಿರುವುದು ಆತಂಕಕಾರಿಯಾಗಿದೆ. ಈ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದ, ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚಿವೆ, ಆದರೆ ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ, ಅರಾಜಕತೆಯತ್ತ ರಾಜ್ಯ ಸಾಗುತ್ತಿದ್ದು, ಸಮಾಜಘಾತುಕರು, ದುಷ್ಕರ್ಮಿಗಳು, ಅಪರಾಧಿಗಳು ಮತ್ತು ಕೊಲೆಗಾರರಿಗೆ ಸುರಕ್ಷಿತ ತಾಣವಾಗಿ ಪರಿವರ್ತಿತವಾಗುತ್ತಿದೆ.

ಅಪರಾಧಿಗಳಿಗೆ ಪೊಲೀಸರ ಭಯವಾಗಲಿ, ಕಾನೂನಿನ ಬಗ್ಗೆ ಗೌರವವಾಗಲಿ ಕಿಂಚಿತ್ತೂ ಇಲ್ಲದೆ ನಿರ್ಭೀತಿಯಿಂದ ತಿರುಗಾಡುತ್ತಿರುವ ಪರಿಸ್ಥಿತಿ ಕಳವಳಕಾರಿ. ರಾಜ್ಯ ಸರ್ಕಾರ ಇನ್ನಾದರೂ ಕಣ್ತೆರೆದು, ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು, ಕಾನೂನು ಸುವ್ಯವಸ್ಥೆಯನ್ನು ಪುನಃ ಸ್ಥಾಪಿಸಬೇಕು. ನಮ್ಮ ತಾಯಂದಿರು, ಸಹೋದರಿಯರು, ಈ ನೆಲದಲ್ಲಿ ಭಯವಿಲ್ಲದೆ ಬದುಕುವಂತೆ ಅವರ ಸುರಕ್ಷತೆ, ಗೌರವ ಘನತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಾನು ತೀವ್ರವಾಗಿ ಒತ್ತಾಯಿಸುತ್ತೇನೆ.

ಈ ಭೇಟಿಯ ಸಮಯದಲ್ಲಿ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಪಕ್ಷದ ರಾಜ್ಯ ವಕ್ತಾರರಾದ ಹರಿಪ್ರಕಾಶ ಕೋಣೆಮನೆ, ಯಲ್ಲಾಪುರ ಮಂಡಲ ಅಧ್ಯಕ್ಷ ಪ್ರಸಾದ್ ಹೆಗಡೆ, ಪಕ್ಷದ ಎಸ್.ಸಿ ಮೋರ್ಚಾ ಪ್ರಧಾನಕಾರ್ಯದರ್ಶಿ ಮಹೇಂದ್ರ ಕೌತಾಳ್, ಅಶೋಕ ಚಲವಾದಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.