ಸುದ್ದಿ ಕನ್ನಡ ವಾರ್ತೆ

ಚಿಕ್ಕಮಗಳೂರು :ಕಾಫಿನಾಡಲ್ಲಿ ಅಪರೂಪದ ಪ್ರೇಮಕಥೆ ಮದುವೆಯಾಗಿ ಅಂತ್ಯ ಕಂಡಿದೆ. ಎಟಿಎಂ ಒಳಗೆ ಆರಂಭವಾದ ಪರಿಚಯ, ಈಗ ಜೀವನ ಸಂಗಾತಿಗಳಾಗಿ ಒಂದಾದ ಘಟನೆ ಜಿಲ್ಲೆಯ ಗಮನ ಸೆಳೆದಿದೆ.

ಎಟಿಎಂನಲ್ಲಿ ಹಣ ತೆಗೆಯಲು ಬಂದಿದ್ದ ಸಾವಿತ್ರಿಗೆ, ಈ-ಲಾಬಿಯಲ್ಲಿ ತನ್ನ ಖಾತೆಗೆ ಹಣ ಜಮಾ ಮಾಡಲು ಬಂದಿದ್ದ ಸಚಿನ್ ಸಹಾಯ ಮಾಡಿದದ್ದು ಈ ಪ್ರೇಮಕಥೆಗೆ ಆರಂಭ. ಹಣ ತೆಗೆಯಲು ಪರದಾಡುತ್ತಿದ್ದ ಸಾವಿತ್ರಿಗೆ ನೆರವಾದ ಸಚಿನ್, ಬಳಿಕ ಸ್ನೇಹ ಬೆಳೆಸಿ, ಇಬ್ಬರೂ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಪ್ರೀತಿಯಲ್ಲಿ ಮುಳುಗಿದರು.
ಈ ಪ್ರೀತಿ ಜಾತಿ ಅಡೆತಡೆಗಳನ್ನು ಮೀರಿ ಬೆಳೆದಿದ್ದು ವಿಶೇಷ. ಪರಿಶಿಷ್ಟ ಜಾತಿಯ ಯುವತಿ ಸಾವಿತ್ರಿ ಮತ್ತು ಬ್ರಾಹ್ಮಣ ಸಮುದಾಯದ ಯುವಕ ಸಚಿನ್, ತಮ್ಮ ಕುಟುಂಬಸ್ಥರನ್ನು ಮನವೊಲಿಸಿ ಮದುವೆಗೆ ಒಪ್ಪಿಗೆ ಪಡೆದರು.

ಕೊನೆಗೂ, ಬೌದ್ಧ ಸಂಘಟನೆಯು ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಚಿಕ್ಕಮಗಳೂರು ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಈ ಮದುವೆ, ಸಮಾಜದಲ್ಲಿ ಸಾಮರಸ್ಯ ಮತ್ತು ಸಮಾನತೆಯ ಸಂದೇಶ ಸಾರಿದೆ.