ಸುದ್ದಿ ಕನ್ನಡ ವಾರ್ತೆ
ಸಾಗರ: ಅಡಕೆ ಮಾರುಕಟ್ಟೆಯಲ್ಲಿ ಕಳಪೆ ಹಾಗೂ ಕಲಬೆರಕೆ ಅಡಕೆ ಬರುತ್ತಿದ್ದು, ಮಲೆನಾಡಿನ ಗುಣಮಟ್ಟದ ಅಡಕೆ ತನ್ನ ಬೆಲೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣ ಕಲಬೆರಕೆ ಅಡಕೆ ಮಾರಾಟ ಮಾಡುವವರು ಮತ್ತು ಮಿಶ್ರಣ ಮಾಡಿ ಅಡಕೆ ಗುಣಮಟ್ಟ ಹಾಳು ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಮಂಗಳವಾರ ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ವತಿಯಿಂದ ಎಪಿಎಂಸಿ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ನಮ್ಮ ಭಾಗದಲ್ಲಿ ಸಾಂಪ್ರದಾಯಿಕ ಅಡಕೆ ಬೆಳೆಗಾರರಿದ್ದು, ಗುಣಮಟ್ಟದ ಅಡಕೆ ಮಾರುಕಟ್ಟೆಗೆ ತರುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಡಿಕೆಗೆ ಕಲಬೆರಕೆ ಹಾಗೂ ಕಳಪೆ ಅಡಕೆ ಮಾರುಕಟ್ಟೆಗೆ ವ್ಯಾಪಕವಾಗಿ ಪ್ರವೇಶ ಮಾಡುತ್ತಿದೆ.

ಅಡಕೆ ಬೆಳೆಗಾರರು ಕಳಪೆ ಹಾಗೂ ಕಲಬೆರಕೆ ಅಡಕೆ ಮಾಡುತ್ತಿಲ್ಲ. ಕೆಲವು ಮಧ್ಯವರ್ತಿಗಳು ಅಡಕೆ ಕಲಬೆರೆಕೆ ಮಾಡುವ ಮೂಲಕ ಅಡಿಕೆಗೆ ಕೆಟ್ಟ ಹೆಸರು ತರುತ್ತಿದ್ದಾರೆ. ಅಡಿಕೆಗೆ ಬಣ್ಣ ಹಾಕಿ ಒಳ್ಳೆಯ ಅಡಕೆ ಜೊತೆ ಸೇರಿಸಿ ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಇದರಿಂದ ಅಡಕೆ ಸೇವನೆ ಮಾಡುವವರ ಆರೋಗ್ಯ ಸಹ ಹಾಳಾಗುತ್ತಿದೆ. ಯಾರು ಕಲಬೆರಕೆ ಮಾಡುತ್ತಿದ್ದಾರೋ ಅವರನ್ನು ಬಂಧಿಸಿ. ಮುಂದಿನ ಹತ್ತು ಹದಿನೈದು ದಿನಗಳಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳದೆ ಹೋದಲ್ಲಿ ಬೆಳೆಗಾರರ ಸಂಘ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಮಾತನಾಡಿ, ಅಡಕೆ ಬೆಳೆಗಾರರ ರಕ್ಷಣೆ ಮಾಡುವುದು ನಮ್ಮ ಆದ್ಯ ಕರ್ತವ್ಯ. ಅಡಕೆ ಕಲಬೆರೆಕೆಯಿಂದ ಬೆಳೆಗಾರರ ಹೆಸರು ಹಾಳಾಗುವ ಜೊತೆಗೆ ಅಡಕೆ ಗುಣಮಟ್ಟ ಕೆಡುತ್ತಿದೆ. ಕೆಲವು ಮಧ್ಯವರ್ತಿಗಳು ಮಾಡುವ ಈ ಕೃತ್ಯದಿಂದಾಗಿ ಅಡಕೆ ಮಾರುಕಟ್ಟೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ತಕ್ಷಣ ಅಧಿಕಾರಿಗಳು ಅಡಿಕೆಗೆ ಬಣ್ಣ ಮಿಶ್ರಣ ಮಾಡುವವರು ಮತ್ತು ಕಳಪೆ ಅಡಕೆ ಮಿಶ್ರಣ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಎಪಿಎಂಸಿ ಕಾರ್ಯದರ್ಶಿ ನಿಜಲಿಂಗಪ್ಪ ತೋಟದ್, ಅಡಿಕೆಗೆ ಬಣ್ಣ ಮಿಶ್ರಣ ಮಾಡುವವರು ಮತ್ತು ಕಳಪೆ ಅಡಕೆ ಮಿಶ್ರಿಣ ಮಾಡುವವರ ಬಗ್ಗೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುತ್ತದೆ.

ಅಂತಹ ಪ್ರಕರಣ ಕಂಡು ಬಂದಲ್ಲಿ ಕಾನೂನಿನ ಪ್ರಕಾರ ಕೈಗೊಳ್ಳಲು ನಮಗೆ ಅವಕಾಶ ಇದೆ. ಅಡಕೆ ಕಳಪೆ ಬಗ್ಗೆ ಮಾಹಿತಿ ಇದ್ದವರು ೯೦೦೮೦೬೩೩೭೮ಗೆ ಕರೆ ಮಾಡಲು ತಿಳಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಆರ್.ಎಸ್.ಗಿರಿ, ಹಿರಿಯ ಸಹಕಾರಿ ಯು.ಎಚ್.ರಾಮಪ್ಪ ಮಾತನಾಡಿದರು. ಮನವಿ ಸಲ್ಲಿಕೆ ಸಂದರ್ಭದಲ್ಲಿ ರವಿಕುಮಾರ್ ಎಚ್.ಎಂ., ಅಬೆಸಂ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಖಂಡಿಕಾ, ಭೀಮನಕೋಣೆ ಪ್ಯಾಕ್ಸ್ ಅಧ್ಯಕ್ಷ ರಾಜೇಶ್ ಕೆ.ಕೆ., ವರುಣ ಹೆಗಡೆ, ವೆಂಕಟಗಿರಿ ಕುಗ್ವೆ, ವೆಂಕಟೇಶ್, ನಾಗಾನಂದ, ರಾಜಶೇಖರ ಹಂದಿಗೋಡು ಇನ್ನಿತರರು ಹಾಜರಿದ್ದರು.