ಸುದ್ದಿ ಕನ್ನಡ ವಾರ್ತೆ

ತೀರ್ಥಹಳ್ಳಿ : ಪಟ್ಟಣದ ರಥಬೀದಿ ರಸ್ತೆಯಲ್ಲಿರುವ ತಿರುಮಲ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಅನಂತ ಚತುರ್ದಶಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮವು ಜರುಗಿತು.

 

ಬೆಳಗ್ಗೆಯಿಂದಲೇ ತಿರುಪತಿ ತಿರುಮಲೇಶ, ತೀರ್ಥ ರಾಜಾಪುರಾಧೀಶ ಶ್ರೀ ಲಕ್ಷ್ಮೀ ವೆಂಕಟರಮಣ ದೇವರು ಭೂ ವೈಕುಂಠ ತಿರುಪತಿಯಿಂದ ತೀರ್ಥಹಳ್ಳಿಗೆ ಆಗಮಿಸಿದ ಪರ್ವ ಕಾಲ ದಿನವಾದ ಅನಂತ ಚತುರ್ದಶಿಯಂದು ದೇವರಿಗೆ ಗಂಗಾ ಪೂಜೆ, ಕಲಶಸ್ಥಾಪನೆ, ವಿಶೇಷ ಪವಮಾನ ಅಭಿಷೇಕ, ಅನಂತ ವ್ರತಾಚರಣೆ, ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಮಹಾಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿತು.

 

ಈ ಸಂದರ್ಭದಲ್ಲಿ ಸಮಾಜದ ಮಹಿಳಾ ಬಾಂಧವರಿಂದ ಸಾಮೂಹಿಕ ಭಜನಾ ಕಾರ್ಯಕ್ರಮವು ಜರುಗಿತು. ಇಂದು ಸಂಜೆ ದೀಪ ನಮಸ್ಕಾರ, ಭಜನೆ, ರಂಗಪೂಜೆ, ಸರ್ವಸೇವೆ ನಡೆಯಲಿದೆ.

 

ಕಾರ್ಯಕ್ರಮದಲ್ಲಿ ತಿರುಮಲ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸಮಾಜದ ಪದಾಧಿಕಾರಿಗಳು, ಸದಸ್ಯರು ಹಾಗೂ ಪಟ್ಟಣದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.