ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಕನ್ನಡ ಶಾಲೆಗಳಿಗೆ ಮಾರಕ ಎಂಬಂತಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಲ್ಲಿ ಸೂಕ್ತ ವಿನಾಯತಿ ನೀಡಬೇಕು ಎಂದು ಗೋವಾದಲ್ಲಿರುವ ಕನ್ನಡ ಸಂಘಟನೆಗಳ ನಿಯೋಗ ಹಾಗೂ ಕನ್ನಡ ಶಾಲಾ ಶಿಕ್ಷಕರ ನಿಯೋಗ ಗುರುವಾರ ಸಾಖಳಿಯ ರವೀಂದ್ರ ಭವನದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರನ್ನು ಭೇಟಿ ಮಾಡಿ ಮನವಿ ಮಾಡಿದರು.
ಗೋವಾದಲ್ಲಿರುವ ಶ್ರೀ ಯಲ್ಲಾಲಿಂಗೇಶ್ವರ ಶಾರದಾ ಮಂದಿರ ಕನ್ನಡ ಮಾಧ್ಯಮ ಪ್ರೌಢಶಾಲೆ, ಸಾಸ್ಮೋಲೇಮ್ ಬೈನಾ, ವಾಸ್ಕೊ 8ನೇ ತರಗತಿಯಿಂದ 10ನೇ ತರಗತಿವರೆಗೆ. ಜರಿ ಜುವಾರಿನಗರ ಶಾಲೆಗೆ ಸಂಬಂಧಿಸಿದ ಪೂರಕ ಶಾಲೆಗಳಾದ ಸರ್ಕಾರಿ ಪ್ರಾಥಮಿಕ ಶಾಲೆ (ಕನ್ನಡ ಮಾಧ್ಯಮ), ಜರಿ ಜುವಾರಿನಗರ ಹಾಗೂ ಸರ್ಕಾರಿ ಪ್ರೌಢಶಾಲೆ ಜುವಾರಿನಗರಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕಾಗಿ ಕನ್ನಡದ ಬದಲಿಗೆ ಮರಾಠಿಯನ್ನು ಅಳವಡಿಸಿಕೊಂಡಿರುವುದರಿಂದ ಕನ್ನಡ ಮಾಧ್ಯಮ ಶಿಕ್ಷಣದ ನಿರಂತರತೆಗೆ ತೀವ್ರ ಅಡಚಣೆ ಉಂಟಾಗಿದೆ.
ಅದೇ ರೀತಿ ಸಾಸ್ಮೋಲೇಮ್ ಬೈನಾ ಶಾಲೆಗೆ ಸಂಬಂಧಿಸಿದ ಪೂರಕ ಶಾಲೆಗಳಾದ ಸರ್ಕಾರಿ ಪ್ರೌಢಶಾಲೆ ಮಂಗೋರ್ ಹಿಲ್, ಸರ್ಕಾರಿ ಪ್ರೌಢಶಾಲೆ ಬೈನಾ, ಸರ್ಕಾರಿ ಪ್ರೌಢಶಾಲೆ ಎಚ್ ಬಿಸಿ ವಡ್ಡೇಂ ನಗರ ಹಾಗೂ ಸರ್ಕಾರಿ ಮಧ್ಯಮ ಶಾಲೆ ಜೆಟ್ಟಿ ಇವುಗಳಲ್ಲಿಯೂ ಕನ್ನಡದ ಬದಲಿಗೆ ಮರಾಠಿಯನ್ನು ಅಳವಡಿಸಲಾಗಿದೆ. ಇದರ ಪರಿಣಾಮವಾಗಿ ಎರಡೂ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹಾಗೂ ವಿದ್ಯಾರ್ಥಿ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.
ಈ ಎರಡೂ ಶಾಲೆಗಳು ಕಳೆದ 33 ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಗೋವಾ ಶಿಕ್ಷಣ ನಿರ್ದೇಶನಾಲಯದ ಮೂಲಕ ಸರ್ಕಾರದಿಂದ ಮಾನ್ಯತೆ ಹಾಗೂ ಅನುದಾನ ಪಡೆಯುತ್ತಿವೆ. ಈ ಶಾಲೆಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬೆಂಗಳೂರು, ಕರ್ನಾಟಕಕ್ಕೆ ಸಂಬಂಧಪಟ್ಟಿವೆ.
ಆದ್ದರಿಂದ ನಮ್ಮ ಶಾಲೆಗಳು ಕರ್ನಾಟಕ ಮಂಡಳಿಯ ಪಠ್ಯಕ್ರಮವನ್ನು ಅನುಸರಿಸಬೇಕಾಗಿದ್ದು, ವಿದ್ಯಾರ್ಥಿಗಳು ಕರ್ನಾಟಕ ಮಂಡಳಿಯ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಕಳೆದ 25 ವರ್ಷಗಳಿಂದ ನಮ್ಮ ವಿದ್ಯಾರ್ಥಿಗಳು ಕಾರವಾರ ಜಿಲ್ಲೆಯ ಉಳ್ಳಗಾ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಇನ್ನೂ ಸಂಪೂರ್ಣವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿಲ್ಲ. ಆದ್ದರಿಂದ ನಮ್ಮ ಶಾಲೆಗಳು ಕರ್ನಾಟಕ ಮಂಡಳಿಯ ಪಠ್ಯಕ್ರಮ, ಮಾರ್ಗಸೂಚಿಗಳು ಮತ್ತು ಶೈಕ್ಷಣಿಕ ನಿಯಮಗಳನ್ನು ಅನುಸರಿಸುತ್ತಿವೆ.
ಆದರೆ, ಪ್ರಸ್ತುತ 5ನೇ, 6ನೇ ಮತ್ತು 7ನೇ ತರಗತಿಗಳಿಗೆ ಗೋವಾ ಮಂಡಳಿಯ ಪಠ್ಯಕ್ರಮವನ್ನು ಅನುಸರಿಸುವ ಅಗತ್ಯವಿದೆ. ಗೋವಾ ಮಂಡಳಿಯು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದ್ದರೂ, ಕನ್ನಡ ಭಾಷಾ ಶಿಕ್ಷಣಕ್ಕೆ ಸೂಕ್ತ ಅವಕಾಶ ಕಲ್ಪಿಸಲಾಗಿಲ್ಲ. ಬದಲಾಗಿ ಮರಾಠಿ ಅಥವಾ ಕೊಂಕಣಿಯನ್ನು ಅಳವಡಿಸಬೇಕೆಂಬ ಒತ್ತಡವಿರುವುದರಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಮತ್ತು ಸಂಸ್ಥೆಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಇದರಿಂದಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಲ್ಲಿ ಸೂಕ್ತ ವಿನಾಯತಿ ಕಲ್ಪಿಸಬೇಕೆಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ಬಳಿ ಮನವಿ ಮಾಡಲಾಯಿತು.
ಇದಲ್ಲದೆ, ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿಯೂ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ಕನ್ನಡವನ್ನು ತೆಗೆದು ಅದರ ಬದಲು ಮರಾಠಿಯನ್ನು ಪರಿಚಯಿಸಲಾಗಿದೆ. ಇದರಿಂದ ಗೋವಾದ ಕನ್ನಡ ಭಾಷಿಕ ಸಮುದಾಯದಲ್ಲಿ ಗಂಭೀರ ಆತಂಕ ಉಂಟಾಗಿದೆ. ಈ ಪರಿಸ್ಥಿತಿಯು ಕನ್ನಡ ಭಾಷಿಕ ವಿದ್ಯಾರ್ಥಿಗಳ ತಾಯಿಭಾಷೆಯಲ್ಲಿಯೇ ಶಿಕ್ಷಣ ಪಡೆಯುವ ಹಕ್ಕಿಗೆ ಧಕ್ಕೆಯಾಗಬಹುದು ಮತ್ತು ಅವರ ಶೈಕ್ಷಣಿಕ, ಭಾಷಿಕ ಹಾಗೂ ಸಾಂಸ್ಕøತಿಕ ಹಿತಾಸಕ್ತಿಗಳ ಮೇಲೂ ದುಷ್ಪರಿಣಾಮ ಉಂಟುಮಾಡಬಹುದು.
ಭಾರತದ ಸಂವಿಧಾನವು ತಾಯಿಭಾಷೆಯ ಶಿಕ್ಷಣದ ಮಹತ್ವವನ್ನು ಗುರುತಿಸಿದೆ. ಮಕ್ಕಳಿಗೆ ತಾಯಿಭಾಷೆಯಲ್ಲಿ ಶಿಕ್ಷಣ ನೀಡಿದಾಗ ಅವರು ವಿಷಯಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂಬುದು ಸರ್ವವಿದಿತ. ತಾಯಿಭಾಷಾ ಶಿಕ್ಷಣವು ಮಕ್ಕಳ ಬೌದ್ಧಿಕ, ಭಾವನಾತ್ಮಕ ಹಾಗೂ ಶೈಕ್ಷಣಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಪ್ರಸ್ತುತ ಪರಿಸ್ಥಿತಿಯು ವಿದ್ಯಾರ್ಥಿಗಳು, ಪೆÇೀಷಕರು ಹಾಗೂ ಶಿಕ್ಷಕರಿಗೆ ಅನೇಕ ತೊಂದರೆಗಳನ್ನು ಉಂಟುಮಾಡುತ್ತಿದ್ದು, ಶಿಕ್ಷಣ ವ್ಯವಸ್ಥೆಯ ಪರಿಣಾಮಕಾರಿ ಅನುಷ್ಠಾನಕ್ಕೂ ಅಡ್ಡಿಯಾಗಿದೆ ಎಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಯಲ್ಲಾಲಿಂಗೇಶ್ವರ ಶಾರದಾ ಮಂದಿರ ಅಧ್ಯಕ್ಷರಾದ ವೈ.ಆರ್.ಬೆಳಗಲ್, ಸತೀಶ ಪಡವಾಳಕರ್, ಕನ್ನಡ ಪರ ಹೋರಾಟಗಾರ ರಂಗಪ್ಪ ಕಮಲ, ಶ್ರೀ ಯಲ್ಲಾಲಿಂಗೇಶ್ವರ ಸಾಸ್ಮೊಲಿಂ ಬೈನಾ ಮುಖ್ಯೋಪಾಧ್ಯಾಯರು, ಕರ್ನಾಟಕ ರಾಜ್ಯೋತ್ಸವ ಸಮೀತಿ ಗೋವಾ ರಾಜ್ಯಾಧ್ಯಕ್ಷ ಮುರಳಿ ಮೋಹನ್ ಶೆಟ್ಟಿ, ಕನ್ನಡ ಸಂಘ ಜುವಾರಿನಗರ ಅಧ್ಯಕ್ಷ ಶಿವಾನಂದ ಬಿಂಗಿ, ಸೇತೃತ್ವದ ನಿಯೋಗ ಭೇಟಿ ಮಾಡಿ ಮುಖ್ಯಮಂತ್ರಿಗಳ ಬಳಿ ಮನವಿ ಸಲ್ಲಿಸಿದರು.
