ಸುದ್ಧಿಕನ್ನಡ ವಾರ್ತೆ
ಅಂಕೋಲಾ : ಶಿರೂರು ಗುಡ್ಡಕುಸಿತದಲ್ಲಿ ಕಾಣೆಯಾದ ಮೂವರ ಶೋಧಕ್ಕಾಗಿ ಗೋವಾದಿಂದ ಶಿರೂರಿಗೆ ಡ್ರೆಜ್ಜರ್ ಯಂತ್ರ ಅಂತು ಇಂತು ತಲುಪಿದ್ದು ಇಂದಿನಿಂದ ಮೂರನೇ ಹಂತದ ಕಾರ್ಯಾಚರಣೆ ಆರಂಭವಾಗುತ್ತಿದೆ.
ಡ್ರೆಜ್ಜರ್ ಯಂತ್ರವನ್ನ ನದಿಯಲ್ಲಿ ಲಂಗರು ಹಾಕಿ ನಿಲ್ಲಿಸಲಾಗಿದ್ದು ,ಡ್ರೆಜ್ಜರ್ ಮೇಲಿರುವ ಕ್ರೇನ್, ಹಿಟಾಚಿ ಸಹಾಯದಿಂದ ಪೈಪ್ ಅಳವಡಿಕೆ ಕಾರ್ಯ ಪ್ರಾರಂಭವಾಗಿದೆ.
ನೌಕಾನೆಲೆ ಗುರುತಿಸಿದ ನಾಲ್ಕು ಸ್ಥಳಗಳಲ್ಲಿ ಮಣ್ಣು ತೆರವುಗೊಳಿಸಲು ಡ್ರೆಜ್ಜರ್ ಸಿದ್ದವಾಗಿದ್ದು ಎನ್ಡಿಆರ್ಎಫ್, ಪೊಲೀಸ್, ತಾಲ್ಲೂಕಾಡಳಿತದ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಗುಡ್ಡಕುಸಿತ ದುರಂತದಲ್ಲಿ 11 ಜನ ಸಾವಾಗಿದ್ದು ಇದುವರೆಗೆ 8 ಮಂದಿ ಶವ ಮಾತ್ರ ಪತ್ತೆ ಮಾಡಲಾಗಿತ್ತು. ಇನ್ನು ಶಿರೂರಿನ ಜಗನ್ನಾಥ ನಾಯ್ಕ, ಲೋಕೇಶ್, ಕೇರಳದ ಅರ್ಜುನ್ಗಾಗಿ ಮೂರನೇ ಹಂತದ ಹತ್ತು ದಿನದ ಕಾರ್ಯಾಚರಣೆ ನಡೆಯಲಿದೆ