ಸುದ್ದಿ ಕನ್ನಡ ವಾರ್ತೆ
ಪಣಜಿ: ಗೋವಾದ ಮಡಗಾಂವದಲ್ಲಿ ನಡೆದ ಕೊಂಕಣ ರೈಲ್ವೆಯ ಬಳಕೆದಾರರ ಸಮಾಲೋಚನಾ ಸಮಿತಿ ಸಭೆಯಲ್ಲಿ ಕೊಂಕಣ ರೈಲುಗಳ ಸೇವೆಗಳ ವಿಸ್ತರಣೆಗೆ ತೀರ್ಮಾನಿಸಲಾಯಿತು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇರಳ, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಪ್ರಮುಖ ರೈಲ್ವೆ ಸಂಬಂಧಿತ ಸಮಸ್ಯೆಗಳು ಮತ್ತು ಬೇಡಿಕೆಗಳ ಕುರಿತು ಗಹನವಾದ ಚರ್ಚೆ ನಡೆಯಿತು.

ರೈಲು ಸಂಖ್ಯೆ 16585/86 ಎಸ್ಎಂವಿಬಿ-ಮುರುಡೇಶ್ವರ ಎಕ್ಸ್ಪ್ರೆಸ್ ಅನ್ನು ಗೋವಾದ ವಾಸ್ಕೋವರೆಗೂ ವಿಸ್ತರಿಸಲು ರೈಲ್ವೆ ಮಂಡಳಿಗೆ ಮರುಪ್ರಸ್ತಾವನೆಯನ್ನು ಸಲ್ಲಿಸಲು ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಯಿತು. ಇದು ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ ಕಲ್ಪಿಸಲಿದೆ.
ಕಾರವಾರ-ಮಡಗಾಂ ನಡುವೆ ಸಂಚರಿಸುವ ಮೆಮು ರೈಲನ್ನು ಗೋವಾದ ಪೆರ್ನಮ್ ವರೆಗೆ ವಿಸ್ತರಿಸುವ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗಿದೆ. ಈ ವಿಸ್ತರಣೆಯು ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಸಭೆಗೆ ತಿಳಿಸಲಾಯಿತು. ಈ ಕ್ರಮವು ಕರಾವಳಿ ಭಾಗದ ಪ್ರಯಾಣಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತವಾಗಲಿದೆ.

ರೈಲು ಸಂಖ್ಯೆ 16595/96 ಕಾರವಾರ-ಬೆಂಗಳೂರು ಪಂಚಗಂಗಾ ಎಕ್ಸ್ಪ್ರೆಸ್‌ಗೆ ಈಗಿರುವ 19 ಬೋಗಿಗಳ ಜತೆಗೆ ಇನ್ನೂ 3 ಹೆಚ್ಚುವರಿ ಬೋಗಿಗಳನ್ನು ಸೇರಿಸಲು ರೈಲ್ವೆ ಮಂಡಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲು ಸಭೆಗೆ ಸೂಚಿಸಲಾಯಿತು.
ಈ ನಿರ್ಧಾರದಿಂದಾಗಿ ಈ ಪ್ರಮುಖ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಸಾಮರ್ಥ್ಯ ವೃದ್ಧಿಯಾಗಲಿದೆ ಎಂದು ಸಭೆ ಹೇಳಿತು.
ಇನ್ನು ಇದೇ ವೇಳೆಯಲ್ಲಿ ಕೊಂಕಣ ರೈಲ್ವೆಗೆ ಸಂಬಂಧಿಸಿದ ಮಾಹಿತಿಯನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುವ ಹೊಸ ಮೊಬೈಲ್ ಅಪ್ಲಿಕೇಶನ್ ‘ಕೆ.ಆರ್. ಮಿರರ್’ ಅನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬಿಡುಗಡೆ ಮಾಡಿದರು. ಈ ಆ್ಯಪ್ ಮೂಲಕ ಪ್ರಯಾಣಿಕರು ರೈಲುಗಳ ಸ್ಥಿತಿ, ವೇಳಾಪಟ್ಟಿ ಮತ್ತು ಇತರೆ ಸೇವೆಗಳ ಕುರಿತು ಮಾಹಿತಿ ಪಡೆಯಬಹುದು.

ಸಭೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯ ರೈಲ್ವೆ ಸಂಬಂಧಿತ ಇತರ ಸಮಸ್ಯೆಗಳ ಕುರಿತು ಕೂಡ ಚರ್ಚಿಸಲಾಯಿತು. ಸಭೆಯಲ್ಲಿ ಕೊಂಕಣ ರೈಲ್ವೆ ಸಿ.ಎಂ.ಡಿ. ಸಂತೋಷ್ ಕುಮಾರ್ ಝಾ ಸೇರಿದಂತೆ ಒಟ್ಟು ಎಂಟು ಲೋಕಸಭಾ ಸದಸ್ಯರು ಭಾಗವಹಿಸಿದ್ದರು. ಈ ಸಭೆಯ ನಿರ್ಣಯಗಳು ಕೊಂಕಣ ರೈಲ್ವೆ ಮಾರ್ಗದಲ್ಲಿ ಪ್ರಯಾಣಿಕರ ಅನುಕೂಲವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ.
ಉತ್ತರ ಕನ್ನಡ ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲು ಪ್ಲಾಟ್ ಫಾರ್ಮ್, ಶೆಲ್ಟರ್ ಮತ್ತು ಇತರೆ ಸೌಕರ್ಯಗಳನ್ನು ಒದಗಿಸಲು ಸೂಚಿಸಲಾಯಿತು.