ಸುದ್ದಿಕನ್ನಡ ವಾರ್ತೆ
ಇರಾನ್/ಇಸ್ರೇಲ್: ಟೆಹ್ರಾನ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಲವಾರು ಮಿಲಿಟರಿ ಕಮಾಂಡರ್‍ಗಳು ಮತ್ತು ವಿಜ್ಞಾನಿಗಳು ಹುತಾತ್ಮರಾಗಿದ್ದಾರೆ ಎಂದು ಇರಾನ್‍ನ ನಾಯಕ ಖಮೇನಿ ದೃಢಪಡಿಸಿದ್ದಾರೆ.

ಇಸ್ರೇಲ್ ವೈಮಾನಿಕ ದಾಳಿಯಲ್ಲಿ 78 ಜನರು ಮೃತಪಟ್ಟಿದ್ದು, 329 ಜನರು ಗಾಯಗೊಂಡಿದ್ದಾರೆ. ಸಾವನ್ನಪ್ಪಿದವರಲ್ಲಿ ಇರಾನ್ ನ ಪರಮಾಣು ಇಂಧನ ಸಂಸ್ಥೆಯ ಮಾಜಿ ಮುಖ್ಯಸ್ಥ ಫೆರೆಡೌನ್ ಅಬ್ಬಾಸಿ ಸೇರಿದಂತೆ 6 ಪರಮಾಣು ವಿಜ್ಞಾನಿಗಳು ಸಹ ಸೇರಿದ್ದಾರೆ ಎನ್ನಲಾಗಿದೆ. ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಜನರಲ್ ಅಮೀರ್ ಅಲಿ ಹಾಜಿಜಾದೆ ಹತ್ಯೆಯಾಗಿರುವುದನ್ನು ಇರಾನ್ ದೃಢಪಡಿಸಿದೆ.

ಐಆರ್‍ಜಿಸಿಯ ಕಮಾಂಡರ್ ಇನ್ ಚೀಫ್ ಮೇಜರ್ ಜನರಲ್ ಹೊಸೇನ್ ಸಲಾಮಿ, ಖತಮ್-ಅಲ್ ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ಕಮಾಂಡರ್ ಮೇಜರ್ ಜನರಲ್ ಘೋಲಮ್ ಅಲಿ ರಶೀದ್ ಸಹ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

ಇರಾನ್ ನ ಕ್ರಾಂತಿಕಾರಿ ಗಾರ್ಡ್‍ನ ಕ್ಷಿಪಣಿ ಕಾರ್ಯಕ್ರಮದ ಮುಖ್ಯಸ್ಥ ಜನರಲ್ ಹಾಜಿಜಾದೆ ಹತ್ಯೆಯಾಗಿರುವುದಾಗಿ ಇಸ್ರೇಲ್ ಹೇಳಿದೆ. ಇರಾನ್ ಈಗ ಅದನ್ನು ದೃಢಪಡಿಸಿದೆ. ಈ ದಾಳಿಯ ಸಮಯದಲ್ಲಿ 6 ಪ್ರಮುಖ ಪರಮಾಣು ವಿಜ್ಞಾನಿಗಳು ಮತ್ತು ಹಲವಾರು ಹಿರಿಯ ಮಿಲಿಟರಿ ನಾಯಕರು ಸಹ ಸಾವನ್ನಪ್ಪಿದ್ದಾರೆ. ಇಸ್ರೇಲ್ ವಾಯುದಾಳಿಯಲ್ಲಿ ಇರಾನ್‍ನ ಸಶಸ್ತ್ರ ಪಡೆಗಳ ಮುಖ್ಯಸ್ಥ ಮೇಜರ್ ಜನರಲ್ ಮೊಹಮ್ಮದ್ ಬಾಘೇರಿ ಸಾವನ್ನಪ್ಪಿದ್ದಾರೆ.

ಇಸ್ರೇಲ್ ಇರಾನ್‍ನಾದ್ಯಂತ ಸರಣಿ ವೈಮಾನಿಕ ದಾಳಿಗಳನ್ನು ನಡೆಸಿದ್ದು, ಪರಮಾಣು ಸೌಲಭ್ಯಗಳು ಮತ್ತು ಮಿಲಿಟರಿ ನಾಯಕತ್ವವನ್ನು ಕೇಂದ್ರೀಕರಿಸಿತ್ತು. ತನ್ನ ದಾಳಿಯ ಸಮಯದಲ್ಲಿ ಇಸ್ರೇಲ್ ಕೆಲವು ಪರಮಾಣು ವಿಜ್ಞಾನಿಗಳು ಮತ್ತು ಮಿಲಿಟರಿ ನಾಯಕರನ್ನು ಕೊಂದಿದೆ ಎಂಬ ಮಾಹಿತಿ ನೀಡಿದೆ.