ಸುದ್ಧಿ ಕನ್ನಡ ವಾರ್ತೆ
ಯಲ್ಲಾಪುರ : ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಮಹಿಳೆಯೊಬ್ಬಳ ಚೈನು ಕಸಿದು ಪರಾರಿಯಾಗಿದ್ದ ಆರೋಪಿಗಳನ್ನು ಯಲ್ಲಾಪುರ ಪೊಲೀಸರು ತಾಲೂಕಿನ ಹುಟಕಮನೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಬಂಧಿಸಿ ಬ್ರಹ್ಮಾವರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬ್ರಹ್ಮಾವರದಲ್ಲಿ ಶನಿವಾರ ಬೆಳಿಗ್ಗೆ ಗೋವಾ ಮೂಲದ, ಹಾಲಿ ಹುಬ್ಬಳ್ಳಿಯಲ್ಲಿ ವಾಸವಾಗಿರುವ ಮೊಯಿನುದ್ದೀನ್, ಸುಜೀತ, ಹಾಗೂ ಗೌರೀಶ ಎಂಬ ಆರೋಪಿಗಳು ಮಹಿಳೆಯೊಬ್ಬಳ ಸುಮಾರು 50 ಗ್ರಾಂ ತೂಕದ ಬಂಗಾರದ ಚೈನನ್ನು ಕಸಿದು ಕೊಂಡು ಹೊಂಡಾ ಕಾರಿನಲ್ಲಿ ಪರಾರಿಯಾಗಿದ್ದು. ಇವರ ಕಾರನ್ನು ಬ್ರಹ್ಮಾವರ ಪೊಲೀಸರು ಹಿಂಬಾಲಿಸಿದ್ದರು. ಇವರ ಕಾರು ಯಲ್ಲಾಪುರದ ಕಡೆಗೆ ಧಾವಿಸಿದ್ದನ್ನು ಕಂಡು ಯಲ್ಲಾಪುರ ಪೊಲಿಸರಿಗೆ ಮಾಹಿತಿ ನೀಡಲಾಗಿತ್ತು.
ಯಲ್ಲಾಪುರದಲ್ಲಿ ಅವರ ಕಾರನ್ನು ಪೊಲೀಸರು ತಡೆದಾಗ ಆರೋಪಿಗಳು ಕಾರನ್ನು ನಿಲ್ಲಿಸದೇ ತಟಗಾರ, ಹುಟಕ ಮನೆ ರಸ್ತೆಯಲ್ಲಿ ಕಾರನ್ನು ಚಲಾಯಿಸಿಕೊಂಡು ಹೋದರು. ರಸ್ತೆಯ ಗಟಾರದಲ್ಲಿ ಕಾರಿನ ಚಕ್ರ ಸಿಲುಕಿದಾಗ ಆರೋಪಿಗಳು ಕಾರನ್ನು ಅಲ್ಲಿಯೇ ಬಿಟ್ಟು ಅರಣ್ಯ ಪ್ರದೇಶದಲ್ಲಿ ನಾಪತ್ತೆ ಆಗಿದ್ದರು. ಗ್ರಾಮಸ್ತರ ಸಹಕಾರದಿಂದ ಅರಣ್ಯ ಪ್ರದೇಶದಲ್ಲಿ ಹುಡುಕಿದಾಗ ಅವರು ಸಿಗಲಿಲ್ಲ. ನಂತರ ಮನೆಯೊಂದರ ಬಳಿ ರಸ್ತೆಯನ್ನು ವಿಚಾರಿಸಿದಾಗ ಆ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಆಗ ಸ್ಥಳಕ್ಕೆ ತೆರಳಿದ ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಅವರನ್ನು ಬ್ರಹ್ಮಾವರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.