ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ :ಸಿ.ಇ.ಟಿ ಪರೀಕ್ಷೆಯ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಬ್ರಾಹ್ಮಣ ಸಮುದಾಯದ ಒಬ್ಬ ವಿದ್ಯಾರ್ಥಿಯನ್ನು ಆತ ಧರಿಸಿದ ಜನಿವಾರವನ್ನು ಕತ್ತರಿಸಿ ಪರೀಕ್ಷೆಗೆ ಪ್ರವೇಶ ನೀಡಿರುವುದನ್ನು ಹಾಗೂ ಬೀದರನಲ್ಲಿ ವಿದ್ಯಾರ್ಥಿ ಜನಿವಾರ ಧರಿಸಿದ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯುವುದಕ್ಕೆ ನಿರಾಕರಿಸಿದ ಘಟನೆಯನ್ನು ಶಾಸಕ ಶಿವರಾಮ ಹೆಬ್ಬಾರ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿ,ಈ ದೇಶವು ವಿವಿಧ ಧರ್ಮ, ಸಂಪ್ರದಾಯ, ಧಾರ್ಮಿಕ ಚಿಹ್ನೆ, ಆಚರಣೆಗಳ ಗೌರವವನ್ನು ಮೂಲಭೂತ ಹಕ್ಕಾಗಿ ಪರಿಗಣಿಸುತ್ತದೆ. ವಿದ್ಯಾರ್ಥಿಯ ಧಾರ್ಮಿಕ ಗುರುತಿಗೆ ಅವಮಾನವಾಗುವ ರೀತಿಯಲ್ಲಿ ನಡೆದುಕೊಂಡದ್ದು ಸಂವಿಧಾನಾತ್ಮಕ ಮೌಲ್ಯಗಳ ವಿರೋಧವಾಗಿದೆ.
ನಾನು ಈ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ವೈಯಕ್ತಿಕ ಮತ್ತು ಧಾರ್ಮಿಕ ಗೌರವವನ್ನು ಕಾಪಾಡಬೇಕು, ಅವರು ಬೆಳೆದ ಸಂಸ್ಕೃತಿಯನ್ನು ಗೌರವಿಸಬೇಕು. ಯಾವುದೇ ರೂಪದ ಜಾತಿ ಅಥವಾ ಧಾರ್ಮಿಕ ಭೇದಭಾವ ಶಿಕ್ಷಣ ಕ್ಷೇತ್ರಕ್ಕೆ ಗೌರವ ನೀಡುವುದಿಲ್ಲ.
ಸರಕಾರ ತಕ್ಷಣ ಈ ಘಟನೆಯ ಕುರಿತು ತನಿಖೆ ನಡೆಸಿ ತಪ್ಪಿತಸ್ಥ ಪರೀಕ್ಷಾಧಿಕಾರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಹಾಗೂ ಪರೀಕ್ಷೆಯಿಂದ ವಂಚಿತನಾಗಿರುವ ವಿದ್ಯಾರ್ಥಿಗೆ ಮರು ಪರೀಕ್ಷೆ ಅವಕಾಶ ನೀಡಬೇಕು ಎಂದು ಆಗ್ರಹಿಸುತ್ತೇನೆ.ಸಮಾಜದಲ್ಲಿ ಎಲ್ಲರಿಗೂ ಸಮಾನ ಗೌರವ, ಮಾನವೀಯತೆ ಹಾಗೂ ಸಂವಿಧಾನಬದ್ಧ ಹಕ್ಕುಗಳಿರಬೇಕು ಎಂಬುದನ್ನು ಮರೆಯಬಾರದು.
ನಾನು ಈ ವಿಷಯವನ್ನು ವಿಧಾನಸಭೆಯ ಅಧಿವೇಶದಲ್ಲಿ ಕೂಡ ಎತ್ತಿಹಿಡಿಯಲು ಸಿದ್ಧನಿದ್ದೇನೆ. ಇಂತಹ ಘಟನೆಗಳು ಪುನರಾವೃತ್ತಿಯಾಗದಂತೆ ವ್ಯವಸ್ಥೆಯ ಪುನರ್ ಪರಿಶೀಲನೆಯ ಅಗತ್ಯವಿದೆ ಎಂದಿದ್ದಾರೆ.