ಸುದ್ದಿ ಕನ್ನಡ ವಾರ್ತೆ

ಜೋಯಿಡಾ: ತಾಲೂಕಿನ ​ಪ್ರಧಾನಿ ಗ್ರಾಮ ಪಂಚಾಯತ ವ್ಯಾಪ್ತಿಯ ಗವೇಗಾಳಿ ಮತ್ತು ಬಾಮಣಗಿ ಗ್ರಾಮದ ಸಾರ್ವಜನಿಕರಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಹಳಷ್ಟು ವರ್ಷಗಳಿಂದ ಸ್ಥಗಿತಗೊಂಡಿದ್ದ ಸಾರಿಗೆ ಸಂಸ್ಥೆಯ ಬಸ್ ಸೌಲಭ್ಯವು ಇಂದು ಸೋಮವಾರ ಗ್ರಾಮಕ್ಕೆ ಅಧಿಕೃತವಾಗಿ ಪುನಾರಂಭಗೊಂಡಿದೆ. ಗ್ರಾಮಕ್ಕೆ ಆಗಮಿಸಿದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ಸಿಗೆ ಗ್ರಾಮಸ್ಥರೆಲ್ಲರೂ ಸೇರಿ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಹಾಗೂ ಆರತಿ ಬೆಳಗುವ ಮೂಲಕ ಅತ್ಯಂತ ಸಡಗರದಿಂದ ಸ್ವಾಗತಿಸಿದರು.

​ಹಲವು ವರ್ಷಗಳಿಂದ ಈ ಮಾರ್ಗದಲ್ಲಿ ಬಸ್ ಬರದೇ ಇದ್ದ ಕಾರಣ, ಗ್ರಾಮದ ಶಾಲಾ ಮಕ್ಕಳು ಹಾಗೂ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ತೀವ್ರ ತೊಂದರೆ ಮತ್ತು ಕಷ್ಟಗಳನ್ನು ಅನುಭವಿಸುತ್ತಿದ್ದರು. ದಾಂಡೇಲಿ ಹಾಗೂ ಜೋಯಿಡಾ ಕಡೆಗೆ ದಿನನಿತ್ಯ ಪ್ರಯಾಣಿಸುವ ಸಾರ್ವಜನಿಕರಿಗೂ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿತ್ತು. ಗ್ರಾಮಸ್ಥರ ಈ ಕಷ್ಟವನ್ನು ಅರಿತು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಮನವಿಯನ್ನು ಸಲ್ಲಿಸಲಾಗಿತ್ತು. ಗ್ರಾಮಸ್ಥರ ನ್ಯಾಯಯುತ ಮನವಿಯನ್ನು ಸ್ವೀಕರಿಸಿದ ಇಲಾಖೆಯ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ, ಇಂದಿನಿಂದ ಮತ್ತೆ ಬಸ್ ಸಂಚಾರವನ್ನು ಆರಂಭಿಸಿದ್ದಾರೆ.ಗ್ರಾಮಕ್ಕೆ ಬಸ್ ಸೌಲಭ್ಯವನ್ನು ಮರಳಿ ತರುವಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಗಣಪತಿ ಗಾವಡ ಅವರು ಪ್ರಮುಖ ನೇತೃತ್ವ ವಹಿಸಿದ್ದರು. ಅವರ ನಿರಂತರ ಶ್ರಮ ಮತ್ತು ಕಾಳಜಿಯ ಫಲವಾಗಿ ಇಂದು ಈ ಭಾಗದ ಜನರಿಗೆ ಸಾರಿಗೆ ಸೌಲಭ್ಯ ಲಭಿಸುವಂತಾಗಿದೆ. ಇವರ ಈ ಜನಪರ ಕಾರ್ಯಕ್ಕೆ ಗವೇಗಾಳಿ ಹಾಗೂ ಬಾಮಣಗಿ ಗ್ರಾಮದ ಸಮಸ್ತ ಜನತೆ, ಶಾಲಾ ಸಮಸ್ತ ಧರಿಸಿದ ವಿದ್ಯಾರ್ಥಿ ವೃಂದದವರು ತಮ್ಮ ವೈಯಕ್ತಿಕ ಪರವಾಗಿ ಹಾಗೂ ಗ್ರಾಮಸ್ಥರ ಪರವಾಗಿ ಹೃತೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಮಾಜಿ ಸದಸ್ಯರಾದ ಗಣಪತಿ ಗಾವಡ ಅವರಿಗೆ ತಮ್ಮ ಗ್ರಾಮದ ಮೇಲೆ ಹೀಗೆಯೇ ಗೌರವ, ಪ್ರೀತಿ ಮತ್ತು ಕರುಣೆ ನಿರಂತರವಾಗಿ ಇರಲಿ ಎಂದು ಗ್ರಾಮಸ್ಥರು ಹರಿಸಿದ್ದಾರೆ.
​ಬಸ್ಸಿನ ಚಾಲಕರು ಹಾಗೂ ನಿರ್ವಾಹಕರ ಸಮ್ಮುಖದಲ್ಲಿ ನಡೆದ ಈ ಸರಳ ಹಾಗೂ ಅರ್ಥಪೂರ್ಣ ಪೂಜಾ ಕಾರ್ಯಕ್ರಮದಲ್ಲಿ ಊರಿನ ಹಿರಿಯರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.

 

ಈ ಮಹತ್ತರ ಕಾರ್ಯ ಯಶಸ್ವಿಯಾಗಲು ಗವೇಗಾಳಿ ಮತ್ತು ಬಾಮಣಗಿ ಗ್ರಾಮದ ಪ್ರತಿಯೊಬ್ಬ ಸಾರ್ವಜನಿಕರು ಕೈಜೋಡಿಸಿದ್ದು, ಈ ಒಗ್ಗಟ್ಟಿನ ಕಾರ್ಯಕ್ಕೆ ವಿಶೇಷ ಶ್ಲಾಘನೆ ವ್ಯಕ್ತವಾಗಿದೆ. “ನಮ್ಮ ಊರು, ನಮ್ಮ ಹೆಮ್ಮೆ” ಎಂಬ ಭಾವನೆಯೊಂದಿಗೆ ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಿರುವುದು ಹೆಮ್ಮೆಯ ವಿಷಯವಾಗಿದೆ.

ಈ ಸಂದರ್ಭದಲ್ಲಿ ಗ್ರಾಮದ ಮುಖ್ಯಸ್ಥರಾದ ಗಣಪತಿ ಗಾವಡಾ, ಸಂಜು ಮಿರಾಶಿ,ಸೀತಾರಾಮ ಮಿರಾಶಿ,ಮುಕುಂದ ಪಾಟೀಲ್, ಗೋಕುಲದಾಸ್ ಕುಶಲಕರ,ಪ್ರಭಾಕರ ಅಕೋಡೇಕರ,ಮೋಹನ ಕುಂಡಲಕರ, ಗುರುದಾಸ ಬಾಳೇಕರ, ಶ್ರೀಪಾದ ನಾಯ್ಕ,ಅಜಯ ಪಾಟೀಲ್ ಹಾಗೂ ಸ್ಥಳೀಯ ಮಕ್ಕಳು ಸಾರ್ವಜನಿಕರು ಇದ್ದರು.