ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ:ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಪತ್ರಕರ್ತ ಜಗದೀಶ್ ನಾಯಕ ಯಲ್ಲಾಪುರ ರವರು ಚಿಕಿತ್ಸೆ ಫಲಕಾರಿಯಾಗದೆಯೇ ಶನಿವಾರ ನಿಧನರಾಗಿದ್ದಾರೆ.
ಅನಾರೋಗ್ಯಕ್ಕೆ ಒಳಗಾಗಿದ್ದ ಜಗದೀಶ್ ನಾಯಕ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಫಂಧಿಸದೆಯೇ ಇರುವ ಕಾರಣ ಅವರನ್ನು ಶನಿವಾರ ಬೆಳಿಗ್ಗೆ ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ ತರಲಾಗಿತ್ತು. ಶನಿವಾರ ಸಂಜೆಯ ವೇಳೆ ಅವರು ನಿಧನರಾಗಿದ್ದಾರೆ.
ಜಗದೀಶ ನಾಯಕ ರವರು ಪ್ರಜಾವಾಣಿ, ಕಡಲವಾಣಿ, ನುಡಿಜೇನು, ಕರಾವಳಿ ಮುಂಜಾವು ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ನಿರ್ವಹಿಸಿದ್ದಾರೆ. ಅವರದ್ದೇ ಆಗಿರುವ ಯಲ್ಲಾಪುರ ನ್ಯೂಸ್ ಎಂಬ ನ್ಯೂಸ್ ಪೋರ್ಟಲ್ ಸಹ ನಡೆಸುತ್ತಿದ್ದರು. ಅವರ ನಿಧನಕ್ಕೆ ಪತ್ರಕರ್ತರು ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.