ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ಅಣಶಿ ಗ್ರಾಮ ಪಂಚಾಯತ ವ್ಯಾಪ್ತಿಯ ಅಣಶಿಯಿಂದ ಸದಾಶಿವಗಡಕ್ಕೆ ಹಾದು ಹೋಗಿರುವ ರಾಜ್ಯಹೆದ್ದಾರಿ ರಸ್ತೆಯ ಕಾರವಾರಕ್ಕೆ ಹೋಗುವಾಗ ಸಿಗುವ ಎಡಭಾಗಕ್ಕೆ ಹೋಗಿರುವ ದಾರಿಯಿಂದ ಸುಮಾರು 2 ಕಿ.ಮೀ ದೂರ ನಡೆದು, ದಟ್ಟ ಕಾಡಿನ ನಡುವೆ ಇರುವ ಶ್ರೀ ಶಿವಲಿಂಗ ಗುಹೆಯಲ್ಲಿರುವ ಶ್ರೀ ದೇವರ ದರ್ಶನ ಪಡೆದು ಭಕ್ತ ಸಮೂಹ ಪುನೀತರಾದರು.

ಕಾಡಿನೊಳಗೆ ಕಲ್ಲು ಬಂಡೆಯ ಗುಹೆಯ ಒಳಗೆ ಇರುವ ಶ್ರೀ ಶಿವಲಿಂಗ ದರ್ಶನ ಭಾಗ್ಯ ಪಡೆಯಲು ಕಡಿದಾದ ಕಾಲು ದಾರಿಯಲ್ಲಿ ನಡೆದುಕೊಂಡು ಸಾಗಿದರು,ವಾಹನಗಳನ್ನು ಹೆದ್ದಾರಿಯ ಪಕ್ಕದಲ್ಲಿ ಪಾರ್ಕ್ ಮಾಡಿದರು. ಮಹಾಶಿವರಾತ್ರಿಯಂದು ನಡೆಯುವ ವಿಶೇಷ ಪೂಜಾ ಕಾರ್ಯಕ್ರಮದ ನಿಮಿತ್ತ ಸ್ಥಳೀಯ ಅಣಶಿ ಗ್ರಾಮದ ಮಿರಾಶಿಗಳು, ಪ್ರಮುಖರು, ಯುವಕರು,ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಶ್ರೀ ದೇವರ ಪರಿಸರದಲ್ಲಿನ,ಕಾಲು ದಾರಿಯ ಸ್ವಚ್ಚತೆಯನ್ನು ಕೈಗೊಳ್ಳುವರು,ಕಲ್ಲಿನ ಗುಹೆಯೊಳಗೆ ಶ್ರೀ ಶಿವಲಿಂಗ ಇರುತ್ತಿದ್ದು,ದೇವರ ದರ್ಶನ ಪಡೆಯಲು ಕೃತಕ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗುತ್ತದೆ.ಅಲ್ಲದೇ ಭಕ್ತರಿಗೆ ದೇವರ ದರ್ಶನ ಭಾಗ್ಯ ಪಡೆಯಲು ಸ್ವಯಂಸೇವಕರ ತಂಡ ಬೆಳಿಗ್ಗೆಯಿಂದ ಸಂಜೆಯವರೆಗೆ ಸಹಕಾರ ನೀಡಿದರು.

ಭಕ್ತರಿಗೆ ಕುಡಿಯುವ ನೀರಿನ,ಅಲ್ಪ ಉಪಹಾರದ ಪ್ರಸಾದ ವಿತರಣೆ ನಡೆಯಿತು. ಭಕ್ತರು ಸರತಿಯ ಸಾಲಿನಲ್ಲಿ ನಿಂತು ಹೂವು,ಅಗರಬತ್ತಿ,ಹಣ್ಣು, ಕಾಯಿಗಳನ್ನು ಸಮರ್ಪಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಭಕ್ತಿಯಿಂದ ಬೇಡಿಕೊಂಡು ಹರಹರ ಮಹಾದೇವ,ಓಂ ನಮಃ ಶಿವಾಯ ಎನ್ನುತ್ತಾ ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನಲ್ಲದೇ, ಬೇರೆ,ಬೇರೆ ದೂರದೂರದ ಪ್ರದೇಶಗಳಿಂದ ಭಕ್ತರು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕಲ್ಲಿನ ಗುಹೆಯೊಳಗಿನ ಶ್ರೀ ಶಿವಲಿಂಗ ದೇವರ ದರ್ಶನ ಭಾಗ್ಯ ಪಡೆದು ಪುನೀತರಾದರು. ಶ್ರೀ ಶಿವಲಿಂಗ ಗುಹೆಯ ದೇವರ ದಾರಿಯ ಆರಂಭದ ಪರಿಸರದಲ್ಲಿ ಪೂಜಾ ಸಾಮಗ್ರಿಗಳ,ವಿವಿಧ ತಿಂಡಿತಿನಿಸಿನ,ತಂಪು ಪಾನೀಯಗಳ, ಚಹಾ,ಭಜಿಗಳ, ಮಕ್ಕಳ ಆಟಿಕೆಯ ವಸ್ತುಗಳ ವ್ಯಾಪಾರ ನಡೆಯಿತು.