ಸುದ್ದಿ ಕನ್ನಡ ವಾರ್ತೆ
ಸಿದ್ದಾಪುರ:ತಾಲೂಕಿನ ಅವರಗುಪ್ಪ ಗ್ರಾಮದ ವಸಂತ ನಾಯ್ಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಫೆಬ್ರವರಿ 21ರವರೆಗೆ ವಿಸ್ತರಿಸಲಾಗಿದೆ. ಬುಧವಾರ ನಡೆದ ವಿಚಾರಣೆಯಲ್ಲಿ ಸಿದ್ದಾಪುರ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಉಮೇಶ ಎಂ.ಪಿ ಅವರು ಈ ಆದೇಶ ನೀಡಿದ್ದಾರೆ. ಕೊಲೆ ಪ್ರಕರಣದಲ್ಲಿ ಒಟ್ಟು ಎಂಟು ಮಂದಿ ಆರೋಪಿಗಳಿದ್ದು, ಅವರಲ್ಲಿ ಮೂವರು ಪೊಲೀಸ್ ಕಸ್ಟಡಿಯಲ್ಲಿ ಇದ್ದು ತನಿಖೆ ಮುಂದುವರಿಸಲಾಗಿದೆ. ಉಳಿದ ಐವರು ಆರೋಪಿಗಳನ್ನು ವಿಡಿಯೋ ಕಾನ್ಸರೆನ್ಸ್ ಮೂಲಕ ವಿಚಾರಣೆ ನಡೆಸಲಾಯಿತು.
ಸುಚಿತ್ರಾ, ಲೋಕನಾಥ್, ಕಮಲಾಕರ ಭಟ್, ಆಕಾಶ ಮತ್ತು ವಿನಯ ಸೇರಿದಂತೆ ಐದು ಮಂದಿಯ ನ್ಯಾಯಾಂಗ ಬಂಧನವನ್ನು ಫೆಬ್ರವರಿ 21ರವರೆಗೆ ವಿಸ್ತರಿಸಲಾಗಿದೆ. ಪೊಲೀಸ್ ಕಸ್ಟಡಿಯಲ್ಲಿ ಇರುವ ಮೂವರು ಆರೋಪಿಗಳಾದ ಮಹಮದ್ ಮೈಪೂಜ್, ಇರ್ಪಾನ್ ಹಾಗೂ ಪೈಜಲ್ ಅವರ ವಿಚಾರಣೆಯನ್ನು ಫೆಬ್ರವರಿ 13ರಂದು ನಡೆಸಲು ನ್ಯಾಯಾಲಯ ತೀರ್ಮಾನಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ.
