ಸುದ್ದಿ ಕನ್ನಡ ವಾರ್ತೆ

ವಿಜಯಪುರ:ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದ ಬಳಿ ಭಾನುವಾರ (ಫೆಬ್ರವರಿ 8) ರೆಡ್‌ಬರ್ಡ್ ಏವಿಯೇಷನ್ ಸಂಸ್ಥೆಗೆ ಸೇರಿದ ತರಬೇತಿ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ನೆಲಕ್ಕೆ ಅಪ್ಪಳಿಸಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಲಬುರಗಿಯಿಂದ ಬೆಳಗಾವಿಗೆ ತರಬೇತಿ ಹಾರಾಟ ನಡೆಸುತ್ತಿದ್ದ ರೆಡ್‌ಬರ್ಡ್ ಪ್ರೈಯಿಂಗ್ ಟ್ರೈನಿಂಗ್ ಆಕಾಡೆಮಿಗೆ ಸೇರಿದ 8 Cessna 172 (VT-EUC) ವಿಮಾನವು ನೆಲಕ್ಕೆ ಅಪ್ಪಳಿಸಿದೆ.

ವಿಮಾನವು ಹಾರಾಟ ನಡೆಸುತ್ತಿದ್ದಾಗ ಮಧ್ಯದಾರಿಯಲ್ಲಿ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ನಿಯಂತ್ರಣ ತಪ್ಪಿದ ವಿಮಾನವನ್ನು ಪೈಲಟ್‌ಗಳು ಬಬಲೇಶ್ವರ ಪೊಲೀಸ್‌ ಠಾಣಾ ವ್ಯಾಪ್ತಿಯ ತೆರೆದ ಜಮೀನಿನಲ್ಲಿ ಇಳಿಸಲು ಪ್ರಯತ್ನಿಸಿದ್ದಾರೆ. ವಿಮಾನದಲ್ಲಿದ್ದ ಸಹಾಯಕ ವಿಮಾನ ತರಬೇತುದಾರ (AFI) ಕ್ಯಾಪ್ಟನ್ ಕುನಾಲ ಮಲ್ಲೋತ್ರಾ ಮತ್ತು ತರಬೇತಿ ಪೈಲಟ್ ಗೌತಮ ಶಂಕರ ಪಿ.ಆರ್. ಅವರು ಗಾಯಗೊಂಡಿದ್ದಾರೆ. ಅಪ್ಪಳಿಸಿದ ತೀವ್ರತೆಗೆ ವಿಮಾನವು ಜಖಂಗೊಂಡಿದ್ದು, ಪೈಲಟ್‌ಗಳಿಗೆ ಗಾಯಗಳಾಗಿವೆ. ಕೂಡಲೇ ಸ್ಥಳಕ್ಕಾಗಮಿಸಿದ 108 ಆಂಬ್ಯುಲೆನ್ಸ್‌ ಮೂಲಕ ಗಾಯಾಳುಗಳನ್ನು ವಿಜಯಪುರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ವಿಮಾನವು ಜಮೀನಿಗೆ ಅಪ್ಪಳಿಸುತ್ತಿದ್ದಂತೆ ದೊಡ್ಡ ಮಟ್ಟದ ಶಬ್ದ ಕೇಳಿಬಂದಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ನೆರವಾಗಿದ್ದಾರೆ. ಡಿಜಿಸಿಎ (DGCA) ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ತಿಳಿಸಿದೆ.