ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ಪೋಟೋಲಿ – ಉಳವಿ ಮಾರ್ಗವಾಗಿ ಹಾದು ಹೋಗಿರುವ ಮುಂಡಗೋಡ ಅಣಶಿ ರಸ್ತೆಯ ಕಾಮಗಾರಿಯ ಕೆಲಸ ಡಿಸೆಂಬರ ತಿಂಗಳಿಂದ ಪ್ರಗತಿಯಲ್ಲಿದ್ದು, ಉಳವಿ ಜಾತ್ರೆಯ ನಿಮಿತ್ತ ರಸ್ತೆಯಲ್ಲಿ ವಾಹನ ಸಂಚಾರ ದಟ್ಟನೆ ಇರುವುದರಿಂದ ಕೆಲಸಕ್ಕೆ ಅಡಚಣೆ ಆಗುವುದರಿಂದ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ರಥಸಪ್ತಮಿಯ ದಿನದಿಂದ ಉಳವಿ ಚನ್ನಬಸವೇಶ್ವರ ಜಾತ್ರೆಯು ಆರಂಭವಾಗಿ,ಭವ್ಯ ಮಹಾರಥೋತ್ಸವ ನಡೆದು ಶುಕ್ರವಾರ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಉಳವಿ ಚನ್ನಬಸವೇಶ್ವರ ಜಾತ್ರೆಯ ನಿಮಿತ್ತ ಚಕ್ಕಡಿ ಗಾಡಿಗಳು, ವಾಹನಗಳು,ಪಾದಯಾತ್ರಿಕರ ಸಂಚಾರದ ಪರಿಣಾಮ ಚಾಪೇರ-ಮರಡಾ-ಕಾನೇರಿ ರಸ್ತೆಯ ಕಾಮಗಾರಿಯನ್ನು ನಿಲ್ಲಿಸಲಾಗಿದ್ದು,ಈಗಾಗಲೇ ಸದರಿ ರಸ್ತೆಯು ಹಾಳಾದ ಕಾರಣ ವಾಹನ ಸವಾರರು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ರಸ್ತೆಯ ಕಾಮಗಾರಿಯನ್ನು ಜಾತ್ರೆಯ ಮುಂಚೆ ಸರಿಪಡಿಸುವುದಾಗಿ ಭರವಸೆಯನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ನೀಡಿದ್ದರು,ಆದರೆ ಕೆಲಸ ಪೂರ್ಣಗೊಂಡಿಲ್ಲದ ಕಾರಣ ಚಾಪೇರ-ಮರಡಾ-ಕಾನೇರಿಯವರೆಗಿನ ರಸ್ತೆಯ ಕಾಮಗಾರಿಯನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ತ್ವರಿತವಾಗಿ ಮುಗಿಸಿ ವಾಹನ ಸವಾರರಿಗೆ ಅನೂಕೂಲ ಮಾಡಿಕೊಡಬೇಕೆಂಬ ಒತ್ತಾಯವಾಗಿದೆ.
