ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಜಗಲಬೇಟ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಜಗಲಬೇಟ ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ಯಶಸ್ವಿಯಾಗಿ ದಿನಾಂಕ:31/01/2026ರ ಶನಿವಾರ ಸಂಜೆ ಸಂಪನ್ನಗೊಂಡಿತು.

ಮಕ್ಕಳ ಸಂತೆಯ ಕಾರ್ಯಕ್ರಮವನ್ನು ಉಪಸ್ಥಿತರಿದ್ದ ಗಣ್ಯರಾದ ಜಗಲಬೇಟ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ವೆಂಕಟೇಶ ಕುಲಕರ್ಣಿ ಮಕ್ಕಳು ಸಂತೆಯ ಮುಖ್ಯ ದ್ವಾರದಲ್ಲಿದ್ದ ರಿಬ್ಬನನ್ನು ಕತ್ತರಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಮೆಟ್ರಿಕ್ ಮೇಳ ಮಕ್ಕಳ ಸಂತೆಗೆ ಆಗಮಿಸಿದ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಜ್ಯೋತಿಬಾ ಕುಂಬಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಮಕ್ಕಳಿಗೆ ವಿದ್ಯಾರ್ಥಿ ಜೀವನದಲ್ಲಿಯೇ ಸಂತೆಯ ಕಲ್ಪನೆ, ಮಾರಾಟದ ಜ್ಞಾನ,ಲಾಭ ನಷ್ಟದ ಲೆಕ್ಕಾಚಾರ, ಗ್ರಾಹಕರೊಂದಿಗೆ ವ್ಯವಹರಿಸುವ ವಿಧಾನ, ಸಂತೆಯಲ್ಲಿ ಮಾರಾಟ ಮಾಡುವ ವಿವಿಧ ವಸ್ತುಗಳ ಮಾಹಿತಿ ಸೇರಿದಂತೆ ಸಂತೆಗೆ ಸಂಬಂಧಿಸಿದ ಇನ್ನಿತರ ವಿಷಯಗಳ ಜೊತೆ ಮಕ್ಕಳಿಗೆ ವ್ಯವಹಾರಿಕ ಜ್ಞಾನ ನೀಡುವುದೇ ಇದರ ಮುಖ್ಯ ಉದ್ದೇಶ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಹ ಶಿಕ್ಷಕರಾದ ಪ್ರಕಾಶ ಕುಂಬಾರ,ಅನುರಾಧ ಮೂಲಿಮನಿ,ಸುಶೀಲಾ,ಅಕ್ಷತಾ ಕೇಣಿ,ಆಕಾಂಕ್ಷ,ಅರ್ಚನಾ,ಅಕ್ಸಾ,ಮಕ್ಕಳ ಸಂತೆಯ ಬಗ್ಗೆ ಮಾಹಿತಿ ನೀಡಿ ಮಕ್ಕಳ ಸಂತೆಯನ್ನು ನಡೆಸಲು ಮಾರ್ಗದರ್ಶನ, ಸಹಕಾರ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸಪ್ನೀಲ್ ದೇಸಾಯಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ವೆಂಕಟೇಶ ಕುಲಕರ್ಣಿ,ಜಗಲಬೇಟ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಹೆಚ್ ಸಿ ಜಾಧವ, ಉಪಾಧ್ಯಕ್ಷರಾದ ಆರ್ಯಾ ಗುರವ,ಎಸ್ ಡಿ ಎಂ ಸಿ ಸದಸ್ಯರು, ಪಾಲಕರು,ಪೋಷಕರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಕ್ಕಳ ಸಂತೆಯಲ್ಲಿ ಸೊಪ್ಪು,ಪರಂಗಿ ಕಾಯಿ, ಮೂಲಂಗಿ,ಪಲ್ಯ ಬಾಳೆಕಾಯಿ, ಸೇರಿದಂತೆ ಇನ್ನಿತರ ತರಕಾರಿಗಳ,ಬಾಳೆಹಣ್ಣು,ಮೂಸಂಬಿ, ಲಿಂಬೆ ಹಣ್ಣು ಸೇರಿದಂತೆ ವಿವಿಧ ಹಣ್ಣಿನ, ತಿಂಡಿತಿನಿಸಿನ,ಪಾನಿಪೂರಿ,ಮಂಡಕ್ಕಿ ಕಾರಾ ಗಿರಮಿಟ್,ತಂಪು ಪಾನೀಯ,ವಿವಿಧ ಬಗೆಯ ಶಾಲಾ ಮಕ್ಕಳ ಸಾಮಗ್ರಿಗಳಾದ ಪೆನ್ನು,ಪೆನ್ಸಿಲ್, ಇನ್ನಿತರ ವಸ್ತುಗಳನ್ನು ವ್ಯಾಪಾರ ಮಳಿಗೆಗಳಲ್ಲಿ ಮಕ್ಕಳು ವ್ಯಾಪಾರ ನಡೆಸಿದರು. ಮಕ್ಕಳ ಸಂತೆಯಲ್ಲಿದ್ದ ಎಲ್ಲಾ ವ್ಯಾಪಾರ ಮಳಿಗೆಗೆ ಶಿಂದೋಳಿ ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡ,ಆಮಶೇತ ಶಾಲೆಯ ಮುಖ್ಯ ಶಿಕ್ಷಕರಾದ ರಮೇಶ ಕದಂ ರವರು ಬೇಟಿ ನೀಡಿ ಮಕ್ಕಳೊಂದಿಗೆ ವ್ಯಾಪಾರ ಮಳಿಗೆಯಲ್ಲಿನ ವಸ್ತುಗಳ ಮಾಹಿತಿ, ಬೆಲೆ,ಮಕ್ಕಳ ವ್ಯವಹಾರ ಜ್ಞಾನ ತಿಳಿದುಕೊಳ್ಳುವ ಮೂಲಕ ವಿವಿಧ ತರಕಾರಿ,ಹಣ್ಣುಗಳನ್ನು ಖರೀದಿಸಿ, ತಿಂಡಿತಿನಿಸಿನ ಸವಿಯನ್ನು ಸವಿದು ಮಕ್ಕಳ ವ್ಯವಹಾರ ಜ್ಞಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಜ್ಯೋತಿಬಾ ಸರ್ ಸಹಕಾರ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕ ವೃಂದದವರು, ಪಾಲಕರು, ಪೋಷಕರು, ಮಕ್ಕಳ ಸಂತೆಯಲ್ಲಿ ಭಾಗವಹಿಸಿ ಮಕ್ಕಳ ಸಂತೆಯಲ್ಲಿನ ವ್ಯಾಪಾರ ಮಳಿಗೆಯಲ್ಲಿನ ವಿವಿಧ ರೀತಿಯ ವಸ್ತುಗಳನ್ನು ಖರೀದಿಸುವ ಮೂಲಕ ಮಕ್ಕಳಲ್ಲಿರುವ ವ್ಯವಹಾರ ಜ್ಞಾನವನ್ನು ಕಂಡು ಹರ್ಷ ವ್ಯಕ್ತಪಡಿಸಿದರು.ಸಂತೆ ಮುಕ್ತಾಯದ ವೇಳೆ ಮಕ್ಕಳು ಖುಷಿಯಿಂದ ತಮಗಾದ ಖರ್ಚಿನ,ಲಾಭದ ಪ್ರಮಾಣದ ಬಗ್ಗೆ ಲೆಕ್ಕಾಚಾರದಲ್ಲಿ ಇರುವುದು ಕಂಡು ಬಂದಿತು.ಒಟ್ಟಿನಲ್ಲಿ ಜಗಲಬೇಟ ಶಾಲಾ ಆವರಣದ ಪರಿಸರವು ಸಂತೆಯ ವಾತಾವರಣದಲ್ಲಿ ರೂಪುಗೊಂಡಿತ್ತು. ಕಾರ್ಯಕ್ರಮದಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾದ ಜ್ಯೋತಿಬಾ ಕುಂಬಾರವರು ಸ್ವಾಗತಿಸಿದರು,ಸಹ ಶಿಕ್ಷಕರು ನಿರೂಪಣೆ ಮಾಡಿದರು,ಪ್ರಭಾರ ಮುಖ್ಯ ಶಿಕ್ಷಕರು ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಿದರು.