ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ಜಿಲ್ಲಾಡಳಿತ,ಜಿಲ್ಲಾ ಪಂಚಾಯತ ಉತ್ತರಕನ್ನಡ,ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ,ಜೋಯಿಡಾ,ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಜೋಯಿಡಾ,ಸಮೂಹ ಸಂಪನ್ಮೂಲ ಕೇಂದ್ರ,ಜೋಯಿಡಾ ಮರಾಠಿ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ತಿಂಬೋಲಿ ಇವರ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ಜೋಯಿಡಾ ಮರಾಠಿ ಕ್ಲಸ್ಟರ್ ಮಟ್ಟದ ಎಫ್ ಎಲ್ ಎನ್ ಕಲಿಕಾ ಹಬ್ಬ 16 ಜನವರಿ 2026 ರ,ಶುಕ್ರವಾರದಂದು ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ತಿಂಬೋಲಿಯಲ್ಲಿ ಎಫ್ ಎಲ್ ಎನ್ ಕಲಿಕಾ ಹಬ್ಬ ಯಶಸ್ವಿಯಾಗಿ ಸಂಪನ್ನಗೊಂಡಿತು.
ಕಾರ್ಯಕ್ರಮದ ಆರಂಭದಲ್ಲಿ ಜೋಯಿಡಾ ಮರಾಠಿ ಕ್ಲಸ್ಟರಿನ ಮುಖ್ಯ ಶಿಕ್ಷಕರ,ಸಹ ಶಿಕ್ಷಕರ ವೃಂದ,ವಿದ್ಯಾರ್ಥಿಗಳು,ತಿಂಬೋಲಿ ಶಾಲೆಯ ಶಿಕ್ಷಕ ವೃಂದ, ಪಾಲಕರ,ಪೋಷಕರ,ವಿದ್ಯಾರ್ಥಿಗಳ ಜೊತೆಗೆ ವಾದ್ಯಗಳೊಂದಿಗೆ ತಿಂಬೋಲಿ ಶಾಲೆಯ ಸುತ್ತಮುತ್ತಲಿನ ಪರಿಸರದಲ್ಲಿ ಮಾತೆಯರ ಪೂರ್ಣ ಕುಂಭ ಹೊತ್ತ ಮೆರವಣಿಗೆಯ ಮೂಲಕ ಕಾರ್ಯಕ್ರಮದ ವೇದಿಕೆಗೆ ಆಗಮಿಸಿದರು. ವೇದಿಕೆಯ ಕಾರ್ಯಕ್ರಮದ ಆರಂಭದಲ್ಲಿ ಕ್ಲಸ್ಟರಿನ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು,ಮುಖ್ಯ ಶಿಕ್ಷಕರು,ಸಹ ಶಿಕ್ಷಕರು,ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು, ನಿರ್ಣಾಯಕರು ಸೇರಿದಂತೆ ಕಾರ್ಯಕ್ರಮದ ಗಣ್ಯರು ಒಳಗೊಂಡಂತೆ ಪಾಲಕರು,ಪೋಷಕರ ಸಮ್ಮುಖದಲ್ಲಿ ವೇದಿಕೆಯ ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರು ಸುಶ್ರಾವ್ಯವಾಗಿ ಸ್ವಾಗತ ಗೀತೆ,ಕಲಿಕಾ ಹಬ್ಬದ ಹಾಡನ್ನು ಹಾಡಿದರು. ಕಾರ್ಯಕ್ರಮದ ವೇದಿಕೆಯ ಮೇಲಿನ ಗಣ್ಯರನ್ನು ವಿದ್ಯಾರ್ಥಿಗಳಿಂದ ಹೂ ಗುಚ್ಛವನ್ನು ನೀಡುವುದರ ಮೂಲಕ ತಿಂಬೋಲಿ ಶಾಲೆಯ ಮುಖ್ಯ ಶಿಕ್ಷಕರಾದ ರಮೇಶ ಕದಂ ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉದ್ಘಾಟಕರಾಗಿ ಆಗಮಿಸಿದ್ದ ಜಗಲಬೇಟ ಗ್ರಾಮ ಪಂಚಾಯತ ಸೋನು ಬಾಬು ಪೊಂಡೆ ಇನ್ನಿತರ ಗಣ್ಯರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಶುಭಾರಂಭ ಮಾಡಿದರು.
ಕಾರ್ಯಕ್ರಮದಲ್ಲಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಜೋಯಿಡಾ ಮರಾಠಿ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ,ನಾರಾಯಣ ದೇಸಾಯಿರವರು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿಯಮಾವಳಿ, ವಾರ್ಷಿಕ ಕ್ರಿಯಾ ಯೋಜನೆಯಂತೆ ಪ್ರತಿ ಕ್ಲಸ್ಟರಿನ ಪ್ರತಿಯೊಂದು ಶಾಲೆಯ ವಿದ್ಯಾರ್ಥಿಗಳು ಕಲಿಕೆಯ ಎಫ್ ಎಲ್ ಎನ್ ಕಲಿಕಾ ಹಬ್ಬದಲ್ಲಿ ಭಾಗವಹಿಸಿ ಒಟ್ಟು 7 ಸ್ಪರ್ಧೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶನ ಮಾಡುವುದು,ಆನಂದಮಯ ಕಲಿಕೆ,ಅಡಿಪಾಯ ಸಾಕ್ಷರತೆ, ಸೃಜನಾತ್ಮಕತೆ,ಸಮುದಾಯದ ಸಹಭಾಗಿತ್ವ,ಕಲಿಕಾ ಚೇತರಿಕೆಗೆ ಪ್ರೇರಣೆ ನೀಡುವುದೇ ಕಲಿಕಾ ಹಬ್ಬದ ಉದ್ದೇಶಗಳಾಗಿವೆ, ಕಲಿಕಾ ಹಬ್ಬ ಕಲಿಕೆಗೆ ಪೂರಕವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಶಿಕ್ಷಕರಾದ ಹೆಚ್ ಸಿ ಜಾಧವ ಸರ್ ರವರು ಮಾತನಾಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿನೂತನ ಕಾರ್ಯಕ್ರಮ ಇದಾಗಿದ್ದು,ಇಲ್ಲಿನ ಪಾಲಕರು, ಪೋಷಕರು ತಮ್ಮ ಮಕ್ಕಳ ಜೊತೆ ಎಫ್ ಎಲ್ ಎನ್ ಕಲಿಕಾ ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿಕೆ,ಸಂಘಟನೆ ಮೆಚ್ಚುವಂತಹದ್ದು, ಕಲಿಕಾ ಹಬ್ಬದ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತನ್ಮೂಲಕ ಶಾಲೆಯ, ಊರಿನ,ಶಿಕ್ಷಕರ ಕೀರ್ತಿಯನ್ನು ಹೆಚ್ಚಿಸಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ತಿಂಬೋಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮನೋಹರ ದೇಸಾಯಿಯವರು ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಜನಾಬಾಯಿ ತಾನಾಜಿ ಶೆಳಕೆ,ಕೃಷ್ಣಾ ಮಿರಾಶಿ ಊರ ಮಿರಾಶಿಗಳು,ಅನಿಲ ರಾಠೋಡ, ರಮೇಶ ಕದಂ,ಪ್ರಕಾಶ ಕುಂಬಾರ, ಜ್ಯೋತಿಭಾ ಕುಂಬಾರ, ಜಗಲಬೇಟ ಪ್ರಾಥಮಿಕ ಶಾಲೆ, ಬೀಬಿ ಕತಿಜಾ ಶಿಂಗರಗಾಂವ ಶಾಲೆ, ತಿಂಬೋಲಿ ಶಾಲೆಯ ಎಸ್ ಡಿ ಎಂ ಸಿ ಯ ಸರ್ವಸದಸ್ಯರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಲಿಕಾ ಹಬ್ಬದ ಸ್ಪರ್ಧೆಯಲ್ಲಿ 1ರಿಂದ 5 ನೇಯ ತರಗತಿಯ ವಿದ್ಯಾರ್ಥಿಗಳಿಗೆ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ ಚಟುವಟಿಕೆಯ ಬಲವರ್ಧನೆಗೆ ಪೂರಕವಾಗಿ ಪೋಷಕರೊಂದಿಗೆ ಮೋಜಿನ ಆಟ,ಕಥೆ ಹೇಳುವುದು, ಗಟ್ಟಿಯಾಗಿ ಓದುವುದು, ಸಂತೋಷದಾಯಕ ಗಣಿತ, ಆರೋಗ್ಯ ಮತ್ತು ಪೌಷ್ಟಿಕಾಂಶ,ಕೈ ಬರಹ,ರಸಪ್ರಶ್ನೆ ಸ್ಪರ್ಧೆಗಳಲ್ಲಿ ಜೋಯಿಡಾ ಮರಾಠಿ ಕ್ಲಸ್ಟರಿನ ಶಾಲೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಸ್ಪರ್ಧೆಯ ನಿರ್ಣಾಯಕರಾಗಿ ಜೋಯಿಡಾ ಮರಾಠಿ ಕ್ಲಸ್ಟರಿನ ಪ್ರಾಥಮಿಕ, ಪ್ರೌಢಶಾಲೆಯ ಶಿಕ್ಷಕರು ಅತ್ತ್ಯುತ್ತಮ ಸಹಕಾರ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶಿಂದೋಳಿ ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡರವರು ಮಾತನಾಡಿ ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚಿಸಲು ಅವರಲ್ಲಿನ ಸೃಜನಾತ್ಮಕತೆ ಮತ್ತು ವಿಮರ್ಶಾತ್ಮಕ ಚಿಂತನೆಗಳನ್ನು ಬೆಳೆಸಲು ಕಲೆ,ಸಂಗೀತ,ಆಟಗಳ ಮೂಲಕ ಸಂತೋಷದಾಯಕ ಕಲಿಕೆಯನ್ನು ಒದಗಿಸುವ ಒಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಿನೂತನ ಕಾರ್ಯಕ್ರಮವಾಗಿದೆ. ಕಲಿಕಾ ಕೊರತೆ ನೀಗಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮದ ಭಾಗವಾಗಿದೆ,ಕಲಿಕಾ ಹಬ್ಬವು ಮಕ್ಕಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸಿ,ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುವ ಒಂದು ವಿಶಿಷ್ಟ ಹಬ್ಬವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ,ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಅಭಿನಂದನಾ ಪತ್ರ ವಿತರಿಸಲಾಯಿತು.
ಮಧ್ಯಾಹ್ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರಿಗೆ, ಜೋಯಿಡಾ ಮರಾಠಿ ಕ್ಲಸ್ಟರಿನ ಮುಖ್ಯ ಶಿಕ್ಷಕರು,ಸಹ ಶಿಕ್ಷಕರು, ನಿರ್ಣಾಯಕರಿಗೆ, ವಿದ್ಯಾರ್ಥಿಗಳಿಗೆ ಎಲ್ಲರಿಗೂ ಅಚ್ಚುಕಟ್ಟಾದ ಶುಚಿ-ರುಚಿಯಾದ ಊಟದ ವ್ಯವಸ್ಥೆಯನ್ನು ತಿಂಬೋಲಿ ಶಾಲಾ ಶಿಕ್ಷಕರು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು,ಪಾಲಕರ,ಪೋಷಕರ ಸಹಕಾರದಲ್ಲಿ ಮಾಡಿದ್ದರು. ತಿಂಬೋಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು ಎಸ್ ಡಿ ಎಂ ಸಿ,ಹಳೆ ವಿದ್ಯಾರ್ಥಿಗಳ ಸಂಘ,ಶಿಕ್ಷಕ ವೃಂದ,ವಿದ್ಯಾರ್ಥಿ ವೃಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ,ಸಮೂಹ ಸಂಪನ್ಮೂಲ ವ್ಯಕ್ತಿಗಳು,ಜೋಯಿಡಾ ಮರಾಠಿ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು,ಸಹ ಶಿಕ್ಷಕ ವೃಂದದವರು,ಸಮಸ್ತ ವಿದ್ಯಾರ್ಥಿ ವೃಂದದವರು ಯಶಸ್ಸಿನ ಕಾರ್ಯಕ್ರಮಕ್ಕೆ ಅತ್ತ್ಯುತ್ತಮ ಸಹಕಾರ ನೀಡಿದರು. ಕಲಿಕಾ ಹಬ್ಬದ ಕಾರ್ಯಕ್ರಮವನ್ನು ಶಿಕ್ಷಕರಾದ ಅಪ್ಪಯ್ಯ ಚನ್ನಿಕುಪ್ಪಿ ಅತ್ಯುತ್ತಮವಾಗಿ ನಿರೂಪಿಸಿದರು.ಕೊನೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷ,ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಶಿಕ್ಷಕರಾದ ಅಣ್ಣಾರಾವ್ ನಿಗಡೆ ವಂದನಾರ್ಪಣೆ ಸಲ್ಲಿಸಿದರು.
