. ಶಿರಸಿ: ಬಿಜೆಪಿ ಅಲ್ಪಸಂಖ್ಯಾತ ಮುಖಂಡನ ಹತ್ಯೆಯ ಯತ್ನ ಪ್ರಕರಣದ ಆರೋಪ ಸಾಬೀತಾಗಿದ್ದು ಆರು ಮಂದಿ ಆರೋಪಿಗಳಿಗೆ10 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.
ನ್ಯಾಯಾಧೀಶರಾದ ಕಿರಣ ಕಿಣಿ ಅವರು ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ. ಶಿಕ್ಷೆಗೆ ಗುರಿಯಾದವರು ಮಹಮ್ಮದ ಫಾರೂಕ್ ಮಹಮ್ಮದ ಶಫೀವುಲ್ಲಾ ಪಟೇಲ್, ಮಹಮ್ಮದ ಸಲೀಂ ಅಲಿಯಾಸ ಸಾಗರ ಭಾಷಾ ಅಬ್ದುಲ್ ರಹೀಂ ಕೆ, ಸರ್ಫರಾಜ್ ಮಹಮ್ಮದ ಶಫೀವುಲ್ಲಾ ಪಟೇಲ್, ಮಹಮ್ಮದ ಆರೀಪ್ ಅಲಿಯಾಸ ಆರೀಪ್ ದವಲ್ ಸಾಬ್ ಕರ್ಜಗಿ, ನಿಸ್ಸಾರ ಅಹ್ಮದ ಖಾಸೀಂಸಾಬ ಶೇಖ್ ಹಾಗೂ ಮೌಸಿನ್ ಅಬ್ದುಲ್ ಶುಕೂರ ಹೊನ್ನಾವರ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಎಸ್ಡಿಪಿಐ ಕಾರ್ಯಕರ್ತರೆಂದು ಹೇಳಲಾಗಿದೆ.
ಪ್ರತಿಯೊಬ್ಬರಿಗೂ ತಲಾ 18 ಸಾವಿರ ರೂಪಾಯಿ ದಂಡ ವಿಧಿಸಿದೆ. ಪ್ರತಿಯೊಬ್ಬ ಆರೋಪಿಗಳು ಗಾಯಾಳು ಮಹಮ್ಮದ ಅನಿಶ್ ಅವರಿಗೆ ತಲಾ10 ಸಾವಿರ ರೂಪಾಯಿಯಂತೆ ಒಟ್ಟು 60 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಆದೇಶಿಸಿದೆ.ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಅಂದಿನ ತನಿಖಾಧಿಕಾರಿ ಶಶಿಕುಮಾರ ಸಿ.ಆರ್ ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. ಪೊಲೀಸ್ ಹೆಡ್ ಕಾನ್ಸೆಟೇಬಲ್ಗಳಾದ ಬಿ.ಆರ್. ಹನುಮಂತ ಹಾಗೂ ರಮೇಶ ಮುಚ್ಚಂಡಿ ಅವರು ಸಾಕ್ಷಿ ವಿಚಾರಣೆಯ ಸಮಯದಲ್ಲಿ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ರಾಜೇಶ ಎಂ. ಮಳಗಿಕರ ಅವರು ಸುದೀರ್ಘ ವಾದ ಮಂಡಿಸಿದ್ದರು. ಪ್ರಕರಣದ ಗಾಂಭೀರ್ಯತೆ ಮತ್ತು ಸಾಕ್ಷ್ಯಗಳನ್ನು ಪರಿಗಣಿಸಿದ ನ್ಯಾಯಾಲಯವು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದೆ. ಅಲ್ಲದೇ ಗಾಯಾಳುಗಳು ಜಿಲ್ಲಾ ಉಚಿತ ಕಾನೂನು ಪ್ರಾಧಿಕಾರದಿಂದಲೂ ಪರಿಹಾರ ಪಡೆಯಲು ಅವಕಾಶ ಕಲಿಸಲಾಗಿದೆ.
