ಸುದ್ದಿ ಕನ್ನಡ ವಾರ್ತೆ
​ಯಲ್ಲಾಪುರ: ತಾಲೂಕಿನ ಉಮ್ಮಚಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಚವತ್ತಿಯಲ್ಲಿ ಮೊಬೈಲ್ ಟವರ್ ಇದ್ದರೂ ನೆಟ್‌ವರ್ಕ್ ಗಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

​ಚವತ್ತಿಯಲ್ಲಿ ಕಳೆದ 2017 ರಲ್ಲಿ ಟವರ್ ನಿರ್ಮಿಸಲಾಗಿದ್ದು, ಒಂದೆರಡು ವರ್ಷಗಳ ಕಾಲ ಉತ್ತಮವಾಗಿಯೇ ಕಾರ್ಯ ನಿರ್ವಹಿಸತ್ತಿತ್ತು. ನಂತರ ಕರೆಂಟ್ ಹೋದರೆ ಅದರ ಜೊತೆಯಲ್ಲೇ ನೆಟ್‌ವರ್ಕ್ ಸಹ ಹೋಗುವ ಸಮಸ್ಯೆ ಉದ್ಭವವಾಯಿತು.

​ಗ್ರಾಮಸ್ಥರು ಸಂಪರ್ಕಕ್ಕಾಗಿ ನೆಚ್ಚಿಕೊಂಡಿರುವುದು ಇದೇ ಟವರ್. ತುರ್ತಾಗಿ ಕರೆ ಮಾಡುವ ಸಂದರ್ಭ ಬಂದಾಗ ಕರೆಂಟ್ ಇಲ್ಲದಿದ್ದರೆ ನೆಟ್‌ವರ್ಕ್ ಸಹ ಇಲ್ಲದೇ ಪರದಾಡಬೇಕಾಗಿದೆ. ವಿಶೇಷವಾಗಿ ಮಳೆಗಾಲದಲ್ಲಿ ವಾರಗಳ ಕಾಲ ವಿದ್ಯುತ್ ಸಮಸ್ಯೆ ಉಂಟಾಗುವುದು ಸಹಜ. ಆಗೆಲ್ಲ ಒಂದು ಕಾಲ್ ಸಹ ಮಾಡಲಾಗದೇ ಜನ ತೊಂದರೆ ಅನುಭವಿಸುತ್ತಾರೆ. ಪ್ರಸ್ತುತ ಒಂದು ವಾರದಿಂದ ಚವತ್ತಿಯಲ್ಲಿ ನೆಟ್‌ವರ್ಕ್ ಇಲ್ಲದೇ ಜನ ಶಪಿಸುತ್ತಿದ್ದಾರೆ. ಕೇವಲ ಚವತ್ತಿಯಲ್ಲಿ ಮಾತ್ರ ಅಲ್ಲ. ತಾಲೂಕಿನ ಗ್ರಾಮೀಣ ಭಾಗದ ಎಲ್ಲ ಟವರ್ ಗಳ ಕಥೆಯೂ ಇದೇ. ಟವರ್ ಇದ್ದರೂ ನೆಟ್‌ವರ್ಕ್ ಇಲ್ಲ, ಅಗತ್ಯ ನೆಟ್‌ವರ್ಕ್ ಗಾಗಿ ಗುಡ್ಡಬೆಟ್ಟ ಅಲೆದಾಡುವುದು ಅನಿವಾರ್ಯವಾಗಿದೆ.