ಸುದ್ದಿ ಕನ್ನಡ ವಾರ್ತೆ
​ಯಲ್ಲಾಪುರ: ತಾಲೂಕಿನ ಉಮ್ಮಚಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಬಾಳಗದ್ದೆಯಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ಮನೆಯೊಂದರ ಮೇಲೆ ಮರದ ಟೊಂಗೆ ಮುರಿದು ಬಿದ್ದು ಹಾನಿಯಾಗಿರುವ ಘಟನೆ ರಾತ್ರಿ ಸಂಭವಿಸಿದೆ.

​ಇಲ್ಲಿನ ನಿವಾಸಿ ಪಾರ್ವತಿ ಶೇಖರ ಪಟಗಾರ್ ಎಂಬುವವರ ಮನೆಯವರೆಲ್ಲ ಊಟ ಮುಗಿಸಿ ಮಲಗಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಮನೆಯವರು ತಕ್ಷಣವೇ ಎಚ್ಚರಗೊಂಡು ಆತಂಕಕ್ಕೊಳಗಾಗಿದ್ದಾರೆ. ಮರದ ದಪ್ಪನೆಯ ಟೊಂಗೆಯು ನೇರವಾಗಿ ಅಡುಗೆ ಕೋಣೆಯ ಮೇಲ್ಛಾವಣಿಯ ಮೇಲೆ ಬಿದ್ದ ಪರಿಣಾಮ ಸುಮಾರು 50ಕ್ಕೂ ಹೆಚ್ಚು ಹಂಚುಗಳು ಪುಡಿಯಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

​ಆದರೆ, ಇದೇ ಮನೆಯ ಪಕ್ಕದಲ್ಲಿರುವ ದೊಡ್ಡ ಕಾಸರಕನ ಮರವು ಪೂರ್ಣ ಪ್ರಮಾಣದಲ್ಲಿ ಮನೆಯ ಕಡೆಗೇ ವಾಲುತ್ತ ನಿಂತಿರುವುದು ನಿವಾಸಿಗಳ ನೆಮ್ಮದಿ ಕೆಡಿಸಿದ್ದು, ಆತಂಕದಲ್ಲಿ ರಾತ್ರಿ ಕಳೆಯುವಂತಾಗಿದೆ. ಈ ಮರವನ್ನು ತಕ್ಷಣವೇ ತೆರವುಗೊಳಿಸಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.