ಸುದ್ದಿ ಕನ್ನಡ ವಾರ್ತೆ
ಶಿರಸಿ: ಶಿರಸಿ ಕುಮಟಾ ನಡುವಿನ ರಾಷ್ಟ್ರೀಯ ಹೆದ್ದಾರಿ ೭೬೬ಇ ನಡುವೆ ಗುಡ್ಡ ಕುಸಿತ ಮುಂದುವರಿದಿದ್ದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಕುಮಟಾ ತಾಲೂಕಿಗೆ ಸೇರಿದ ದೇವಿಮನೆ ಘಟ್ಟದಲ್ಲಿ ರವಿವಾರ ಬೆಳಗ್ಗೆ ಭೂ ಕುಸಿತವಾಗಿದ್ದು, ಯಾವುದೇ ವಾಹನ ಸಂಚಾರ ಮಾಡಲು ಸಾಧ್ಯವಿಲ್ಲವಾಗಿದೆ.
ಸಾಗರ ಮಾಲಾ ಯೋಜನೆಯಲ್ಲಿ ಕಳೆದ ಐದು ವರ್ಷಗಳಿಂದ ಕುಂಟುತ್ತ ಸಾಗುತ್ತಿದೆ. ಆರ್ ಎನ್ ಎಸ್ ಕಾಮಗಾರಿ ನಡೆಸುತ್ತಿದ್ದು, ಕಳೆದ ತಿಂಗಳ ಭಾರಿ ಮಳೆಗೆ ರಾಗಿಹೊಸಳ್ಳಿ ಬಳಿ ಹಾಕಲಾದ ತಾತ್ಕಾಲಿಕ ಸೇತುವೆ ಕೂಡ ಕೊಚ್ಚಿಹೋಗಿ ವಾರಗಳ ಸಂಚಾರ ಕಡಿತವಾಗಿತ್ತು.
ಕಳೆದ ಶುಕ್ರವಾರ ರಾತ್ರಿ ಮೂವರು ಪ್ರಯಾಣಿಕರ ವಾಹನದ ಮೇಲೆ ಬೀಳುತ್ತಿದ್ದ ಕಲ್ಲು ಬಂಡೆ, ಧರೆ ಕೂಡ ಕೂದಲೆಳೆಯಲ್ಲಿ ತಪ್ಪಿತ್ತು. ಈ ಮಾರ್ಗ ಅವೈಜ್ಞಾನಿಕ ಧರೆ ಕಡಿತ ಅಪಾಯದ ಕರೆ ಗಂಟೆಯಾಗಿಸುತ್ತಿದೆ.
ಇನ್ನು ಬದಲಿ ಮಾರ್ಗವಾಗಿ ಕರಾವಳಿ ಹಾಗೂ ಮಲೆನಾಡು, ಉತ್ತರ ಕರ್ನಾಟಕ ಸಂಪರ್ಕಕ್ಕೆ ಅಂಕೋಲಾ, ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಬಳಸಬಹುದು. ಅಥವಾ ಕಾರವಾರದಿಂದ ಮಾಬಗೆ ಘಟ್ಟದ ಮೇಲೆ, ಹೊನ್ನಾವರ ಕಡೆಯಿಂದ ಗೇರಸೊಪ್ಪ, ಮಾವಿನಗುಂಡಿ ಮೂಲಕ ಶಿರಸಿ ಕಡೆಗೆ ತಲುಪಬಹುದು.